ಇತರೆ

ಕೋನೀಯ ಎಲೆ ಚುಕ್ಕೆ ರೋಗ (ಆಂಗ್ಯುಲರ್ ಲೀಫ್ ಸ್ಪಾಟ್)

Pseudomonas syringae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ, ವೃತ್ತಾಕಾರದ ಕಲೆಗಳು ಕಾಣಿಸಿಕೊಳ್ಳುತ್ತವೆ.
  • ಇವು ನಂತರ ದೊಡ್ಡ, ಕೋನೀಯ, ಅನಿಯಮಿತ, ನೀರಿನಲ್ಲಿ ನೆನೆಸಿದಂತಹ ಕಲೆಗಳಾಗುತ್ತವೆ.
  • ಸೋಂಕಿಗೊಳಗಾದ ಭಾಗಗಳು ಬೂದು ಬಣ್ಣಕ್ಕೆ ತಿರುಗಿ, ಉದುರುತ್ತವೆ.
  • ಮತ್ತು ಅನಿಯಮಿತ ರಂಧ್ರಗಳನ್ನು ಉಂಟು ಮಾಡುತ್ತವೆ.
  • ಹಣ್ಣುಗಳ ಮೇಲೆ ವೃತ್ತಾಕಾರದ ಕಲೆಗಳು, ನಂತರ ಬಿಳಿ ಬಣ್ಣಕ್ಕೆ ತಿರುಗಿ ಬಿರುಕು ಬಿಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಆರಂಭದಲ್ಲಿ ಸಣ್ಣ, ವೃತ್ತಾಕಾರದ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ನಂತರ ಕೋನೀಯ ಅಥವಾ ಅನಿಯಮಿತ, ನೀರಿನಲ್ಲಿ-ನೆನೆಸಿದಂತಹ ದೊಡ್ಡ ತೇಪೆಗಳಾಗಿ ಬೆಳೆಯುತ್ತವೆ. ತೇವವಾದ ವಾತಾವರಣದಲ್ಲಿ, ಬ್ಯಾಕ್ಟೀರಿಯಾದ ರಸಸ್ರಾವದ ಹನಿಗಳು ಎಲೆಗಳ ಕೆಳಭಾಗದಿಂದ ಹೊರಹೊಮ್ಮುತ್ತವೆ. ಈ ಹನಿಗಳು ತೇವಾಂಶವನ್ನು ಕಳೆದುಕೊಂಡು, ಶುಷ್ಕ ವಾತಾವರಣದಲ್ಲಿ ಬಿಳಿಯ ಪುಡಿಯಂತಾಗುತ್ತದೆ. ನಂತರ, ಸೋಂಕಿತ ಭಾಗಗಳು ಒಣಗಿ, ಬೂದು ಬಣ್ಣಕ್ಕೆ ತಿರುಗಿ, ಕುಗ್ಗುತ್ತವೆ. ಸಾಮಾನ್ಯವಾಗಿ ಆರೋಗ್ಯಕರ ಎಲೆಯ ಅಂಗಾಂಶದಿಂದ ಬೇರ್ಪಟ್ಟು ಹರಿದುಹೋಗಿ, ಬಿದ್ದುಹೋಗುತ್ತವೆ. ಈ ಗಾಯಗಳಿಗೆ ಸಾಮಾನ್ಯವಾಗಿ ಹಳದಿ ಅಂಚುಗಳಿರುತ್ತವೆ. ದೊಡ್ಡದಾದ, ಅನಿಯಮಿತ ರಂಧ್ರಗಳಿಂದಾಗಿ ಎಲೆ ಚಿಂದಿಯಂತಾಗುತ್ತದೆ. ಕೆಲವು ನಿರೋಧಕ ಪ್ರಭೇದಗಳಲ್ಲಿ, ಗಾಯಗಳು ಚಿಕ್ಕದಾಗಿರುತ್ತವೆ ಮತ್ತು ಹಳದಿ ಅಂಚುಗಳನ್ನು ಹೊಂದಿರುವುದಿಲ್ಲ. ಸೋಂಕಿತ ಹಣ್ಣುಗಳಲ್ಲಿ ಸಣ್ಣ, ಬಹುತೇಕ ವೃತ್ತಾಕಾರವಾದ ಕಲೆಗಳು ಸಾಮಾನ್ಯವಾಗಿ ಹೊರಗೆ ಕಾಣುತ್ತವೆ. ಸೋಂಕಿತ ಅಂಗಾಂಶಗಳು ಸತ್ತಾಗ, ಅವು ಬಿಳಿ ಬಣಕ್ಕೆ ತಿರುಗುತ್ತವೆ ಮತ್ತು ಬಿರಿಯುತ್ತವೆ. ಇದು ಅವಕಾಶಕ್ಕಾಗಿ ಕಾಯುತ್ತಿರುವ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಒಳಗೆ ಮನೆ ಮಾಡಿ ಹಣ್ಣು ಕೊಳೆಯಲು ಅವಕಾಶ ಮಾಡಿಕೊಡುತ್ತದೆ. ಹೊಸ ಹಣ್ಣುಗಳಿಗೆ ಸೋಂಕು ತಗುಲಿದರೆ ಅವು ಅಧಿಕ ಪ್ರಮಾಣದಲ್ಲಿ ಉದುರಬಹುದು.

Recommendations

ಜೈವಿಕ ನಿಯಂತ್ರಣ

ಸೋಂಕಿತ ಬೀಜಗಳನ್ನು ಬೆಳ್ಳುಳ್ಳಿ ದ್ರಾವಣ ಮತ್ತು ಬಿಸಿ ನೀರಿನಲ್ಲಿ (50 °C) 30 ನಿಮಿಷಗಳವರೆಗೆ ಇಡಬಹುದು. ಹಸಿರುಮನೆಗಳಲ್ಲಿ, ಡಿಹ್ಯೂಮಿಫೈಯರ್ಗಳನ್ನು ಬಳಸಿ ರಾತ್ರಿ-ಸಮಯದ ಆರ್ದ್ರತೆಯನ್ನು ನಿಯಂತ್ರಿಸುವ ಮೂಲಕ (80-90% ಗೆ) ಕೋನೀಯ ಎಲೆ ಚುಕ್ಕೆ ರೋಗವನ್ನು ನಿಗ್ರಹಿಸಬಹುದು. ಜೈವಿಕ ನಿಯಂತ್ರಣ ಏಜೆಂಟಾದ ಪೆಂಟಾಫೇಜ್, P. ಸಿರಿಂಜಿಯನ್ನು ಪರಿಣಾಮಕಾರಿಯಾಗಿ ನಾಶಪಡಿಸುತ್ತದೆ. ಸಾವಯವ ತಾಮ್ರದ ಶಿಲೀಂಧ್ರನಾಶಕಗಳು ರೋಗದ ಹರಡುವಿಕೆಯನ್ನು ನಿಧಾನಗೊಳಿಸುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವನ್ನು ಮೊದಲು ಪರಿಗಣಿಸಿ. ತಾಮ್ರದ ಹೈಡ್ರಾಕ್ಸೈಡ್ ಹೊಂದಿರುವ ಕ್ರಿಮಿನಾಶಕಗಳನ್ನು ಹಾಕಬಹುದು. ಉಷ್ಣತೆಯು 24 °C ಗಿಂತ ಹೆಚ್ಚಾಗಿದ್ದರೆ ಮತ್ತು ಎಲೆಗಳು ಆರ್ದ್ರವಾಗಿದ್ದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಒಣಗಿದ ಎಲೆಗಳ ಮೇಲೆ ತಾಪಮಾನ ಹೆಚ್ಚಿರುವ ದಿನಗಳಲ್ಲಿ ಸಿಂಪಡಿಕೆ ಮಾಡುವುದರಿಂದ ಸಸ್ಯಗಳಿಗೆ ಹಾನಿಯಾಗಬಹುದು. ರೋಗ ನಿಯಂತ್ರಣವನ್ನು ಸಾಧಿಸಲು ವಾರಕ್ಕೊಮ್ಮೆ ಸಿಂಪಡಿಸುವುದು ಅಗತ್ಯವಾಗಬಹುದು.

ಅದಕ್ಕೆ ಏನು ಕಾರಣ

ಎಲ್ಲಾ ಕುಕುರ್ಬಿಟ್ ಬೆಳೆಗಳಿಗೆ ಸೋಂಕು ಉಂಟುಮಾಡುವ ಸ್ಯೂಡೋಮೊನಸ್ ಸಿರಿಂಜಿಯ ಎಂಬ ಬ್ಯಾಕ್ಟೀರಿಯಾದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಸೋಂಕಿತ ಬೀಜಗಳಲ್ಲಿ ಅಥವಾ ಮಣ್ಣಿನಲ್ಲಿರುವ ಸಸ್ಯದ ಉಳಿಕೆಗಳಲ್ಲಿ 2 ವರ್ಷಗಳಿಗಿಂತಲೂ ಹೆಚ್ಚು ಕಾಲ ಉಳಿದುಕೊಂಡಿರುತ್ತದೆ. ಆರ್ದ್ರತೆ ಅಧಿಕವಾಗಿದ್ದಾಗ, ಸೋಂಕಿನ ಸ್ಥಳದಲ್ಲಿ ಬಿಳಿಯಾದ ಅಥವಾ ಪಾರದರ್ಶಕವಾದ, ಜಿಗುಟಾದ ಬ್ಯಾಕ್ಟೀರಿಯಾ ಸೋರಿಕೆ ಕಂಡುಬರುತ್ತದೆ. ಈ ಬ್ಯಾಕ್ಟೀರಿಯಾಗಳು ಕಾರ್ಮಿಕರ ಕೈಗಳು ಮತ್ತು ಉಪಕರಣಗಳು, ಅಥವಾ ನೀರು ಅಥವಾ ಗಾಳಿ ಅಥವಾ ಕೀಟಗಳ ಮೂಲಕ ಸಸ್ಯಗಳಿಂದ ಸಸ್ಯಕ್ಕೆ ಹರಡುತ್ತದೆ. ಅಂತಿಮವಾಗಿ, ಬ್ಯಾಕ್ಟೀರಿಯವು ಎಲೆ ಮೇಲ್ಮೈಯಲ್ಲಿರುವ ರಂಧ್ರಗಳ (ಸ್ಟೊಮಾಟಾ) ಮೂಲಕ ಸಸ್ಯವನ್ನು ಪ್ರವೇಶಿಸುತ್ತದೆ. ಹಣ್ಣು ಸೋಂಕಿಗೆ ಒಳಗಾದಾಗ, ಬ್ಯಾಕ್ಟೀರಿಯಾವು ಆಳಕ್ಕೆ ಇಳಿದು ಬೀಜಗಳಿಗೂ ಸೋಂಕು ತಗಲಿಸುತ್ತದೆ. ವಿಚಿತ್ರವೆಂದರೆ, ತಂಬಾಕು ನೆಕ್ರೋಸಿಸ್ ವೈರಸ್ ನಿಂದ ಸೋಂಕಿಗೆ ಒಳಗಾದ ಎಲೆಗಳು ಕೋನೀಯ ಎಲೆ ಚುಕ್ಕೆ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾದ ವಿರುದ್ಧ ಸ್ವಲ್ಪಮಟ್ಟಿನ ನಿರೋಧಕತೆಯನ್ನು ಒದಗಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಮಾತ್ರ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆಯ್ಕೆ ಮಾಡಿ.
  • ತುಂತುರು ನೀರಾವರಿ ಬದಲಿಗೆ ಫರೋ ನೀರಾವರಿ ಬಳಸಿ.
  • ಮತ್ತು ಅತಿಯಾಗಿ ನೀರು ಹಾಕಬೇಡಿ.
  • ಚೆನ್ನಾಗಿ ನೀರು ಬಸಿದಿರುವ ಜಾಗವನ್ನು ಆರಿಸಿ.
  • ಕನಿಷ್ಠ 2 ವರ್ಷಗಳ ಕಾಲ ಕುಕುರ್ಬಿಟ್ ಗಳನ್ನು ಬೆಳೆದಿರದ ಜಮೀನಿನಲ್ಲಿ ಮಾತ್ರ ಬೀಜ ಮತ್ತು ತರಕಾರಿ ಉತ್ಪಾದನೆಗಾಗಿ ಸಸ್ಯವನ್ನು ನೆಡಿ.
  • ಸೋಂಕಿತ ಪ್ರದೇಶಗಳಲ್ಲಿ, ಕನಿಷ್ಠ 3 ವರ್ಷಗಳವರೆಗೆ ಕುಕುರ್ಬಿಟ್ ಗಳನ್ನು ನೆಡಬೇಡಿ.
  • ಸೋಂಕಿತ ಅಥವಾ ಅನುಮಾನಾಸ್ಪದ ಸಸ್ಯ ಪದಾರ್ಥಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ (ಉದಾಹರಣೆಗೆ ಸುಟ್ಟುಬಿಡಿ).
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ಜಮೀನನ್ನು ಪರೀಕ್ಷಿಸಿ.
  • ಕೆಲಸದ ನಂತರ ಸಲಕರಣೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ