ಕೆಸು ಗೆಡ್ಡೆಯ ಎಲೆ ಕೊಳೆ ರೋಗ

TARO

ಕೆಸು ಗೆಡ್ಡೆಯ ಎಲೆ ಕೊಳೆ ರೋಗ

Phytophthora colocasiae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸುತ್ತಲೂ ಹಳದಿ ವಲಯವಿರುವ ಸಣ್ಣ ಕಂದು ಬಣ್ಣದ ಕಲೆಗಳು ಕಾಣಿಸಿಕೊಳ್ಳುವುದು.
  • ಕಲೆಗಳು ದೊಡ್ಡದಾಗಿ ಬೆಳೆಯುವುದು.
  • ರೋಗಪೀಡಿತ ಕಲೆಗಳಿಂದ ಕಿತ್ತಳೆ ಅಥವಾ ಕೆಂಪು ಬಣ್ಣದ ದ್ರವವು ಸೋರುವುದು.
  • ಇದು ಇಡೀ ಎಲೆಗಳನ್ನು ನಾಶಪಡಿಸಬಲ್ಲದು.
  • ತೇವವಿರುವ ಮತ್ತು ಬೆಚ್ಚಗಿನ ಹವಾಮಾನದಲ್ಲಿ ವೇಗವಾಗಿ ಹರಡುತ್ತದೆ.
  • ಎಲೆಗಳು, ಕಾಂಡಗಳು ಮತ್ತು ಗೆಡ್ಡೆಗಳ ಮೇಲೆ ದಾಳಿ ಮಾಡಿ ಕೊಯ್ಲಿನ ನಂತರ ಅವು ಕೊಳೆಯುವಂತೆ ಮಾಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಕೆಸು ಗೆಡ್ಡೆಯ ಎಲೆ ಕೊಳೆ ರೋಗ

TARO

ರೋಗಲಕ್ಷಣಗಳು

ರೋಗದ ಮೊದಲ ಲಕ್ಷಣಗಳು ನೀರಿನಿಂದ ಒದ್ದೆಯಾದಂತಿರುವ ಅಂಚುಗಳು ಮತ್ತು ಸುತ್ತಲೂ ತಿಳಿ ಹಳದಿ ವಲಯವಿರುವ ಸಣ್ಣ ಕಂದು ಬಣ್ಣದ ಕಲೆಗಳಾಗಿ ಕಾಣಿಸಿಕೊಳ್ಳುತ್ತವೆ. ಎಲೆಗಳ ಮೇಲೆ ನೀರು ಸಂಗ್ರಹವಾಗುವ ಜಾಗದಲ್ಲಿ ಈ ಕಲೆಗಳು ಮೂಡುತ್ತವೆ. ಇವು ಆರಂಭದಲ್ಲಿ ಸಣ್ಣದಾಗಿದ್ದರೂ ತುಂಬಾ ವೇಗವಾಗಿ ದೊಡ್ಡದಾಗಿ, ದುಂಡಗಿನ ಕಂದು ಕಲೆಗಳಾಗಿ ಬೆಳೆದು ಎಲೆಯ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಆವರಿಸಿಕೊಳ್ಳುತ್ತವೆ. ರೋಗಪೀಡಿತ ಕಲೆಗಳಿಂದ ಪ್ರಕಾಶಮಾನವಾದ ಕಿತ್ತಳೆ ಅಥವಾ ಕೆಂಪು-ಕಂದು ಬಣ್ಣದ ದ್ರವವು ಸೋರುವುದು ಈ ರೋಗದ ಒಂದು ವಿಶೇಷ ಲಕ್ಷಣವಾಗಿದೆ. ಈ ದ್ರವವು ಎಲೆಗಳ ಕೆಳಭಾಗದಲ್ಲಿ ಸುಲಭವಾಗಿ ಕಾಣಿಸುತ್ತದೆ. ಹಗಲಿನ ವೇಳೆಯಲ್ಲಿ ಈ ದ್ರವವು ಒಣಗಿ ಗಟ್ಟಿಯಾಗಿ, ಕಡು ಕಂದು ಬಣ್ಣಕ್ಕೆ ತಿರುಗುತ್ತದೆ. ಕಲೆಗಳು ದೊಡ್ಡದಾಗುತ್ತಿದ್ದಂತೆ ಅವು ಇಡೀ ಎಲೆಯನ್ನು ನಾಶಪಡಿಸುತ್ತವೆ. ಎಲೆಗಳ ಮೇಲೆ ಬಿಳಿ ಬಣ್ಣದ ಪುಡಿಯಂತಹ ಉಂಗುರಗಳಿಂದ ಆವೃತವಾದ ಸಣ್ಣ ರಂಧ್ರಗಳು ಕಾಣಿಸಿಕೊಳ್ಳಬಹುದು. ಎಲೆಯ ತೊಟ್ಟುಗಳ ಮೇಲೆ ಕೆಂಪು-ಕಂದು ಬಣ್ಣದ ಕಡು ಕಲೆಗಳು ಮೂಡುತ್ತವೆ. ರೋಗವು ನೆಲದೊಳಗಿನ ಗೆಡ್ಡೆಗಳನ್ನು ತಲುಪಿದಾಗ, ಅವು ಕಂದು ಬಣ್ಣಕ್ಕೆ ತಿರುಗಿ ಗಟ್ಟಿಯಾಗುತ್ತವೆ, ಆದರೆ ಕೊಯ್ಲು ಮಾಡಿದ ತಕ್ಷಣವೇ ಬೇಗನೆ ಕೊಳೆತುಹೋಗುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಟ್ರೈಕೋಡರ್ಮಾ ಜೀವಿಗಳು ಅತ್ಯಂತ ಭರವಸೆಯ ಜೈವಿಕ ನಿಯಂತ್ರಣದ ಕಣಗಳಾಗಿ ಕಂಡುಬಂದಿವೆ. ಬಿತ್ತನೆಗೆ ಮುನ್ನ ಸಣ್ಣ ಗೆಡ್ಡೆಗಳನ್ನು ಟ್ರೈಕೋಡರ್ಮಾ ಮಿಶ್ರಣದಲ್ಲಿ ಅದ್ದಿ ತೆಗೆಯಿರಿ. ಸಸ್ಯದ ಸಾರವನ್ನು 10-20 ಮಿಗ್ರಾಂ/ಮಿಲಿ ಸಾಂದ್ರತೆಯಲ್ಲಿ ಸಿದ್ಧಪಡಿಸಿಕೊಳ್ಳಿ. ರೋಗ ಕಾಣಿಸಿಕೊಳ್ಳುವ ಮುನ್ನವೇ ಇದನ್ನು ಮುಂಜಾಗ್ರತಾ ಸಿಂಪಡಣೆಯಾಗಿ ಬಳಸಿ. ಬಿತ್ತನೆ ಸಾಮಗ್ರಿಗಳನ್ನು ನಾಟಿಗೆ ಮುಂಚಿತವಾಗಿ ಜೈವಿಕ ನಿಯಂತ್ರಣದ ಔಷಧಿಗಳಿಂದ ಉಪಚರಿಸಿ. ಉತ್ತಮ ಫಲಿತಾಂಶಕ್ಕಾಗಿ ವಿವಿಧ ಜೈವಿಕ ಕಣಗಳನ್ನು ಸಂಯೋಜಿಸಿ ಬಳಸಿ.

ರಾಸಾಯನಿಕ ನಿಯಂತ್ರಣ

ಕೆಸುಗೆಡ್ಡೆ ಎಲೆ ಕೊಳೆ ರೋಗಕ್ಕೆ ರಾಸಾಯನಿಕ ನಿಯಂತ್ರಣವು ಹೆಚ್ಚಾಗಿ ಪ್ರಾಯೋಗಿಕವಾಗಿ ಬರುವುದಿಲ್ಲ. ಪದೇ ಪದೇ ಬರುವ ಮಳೆಯು ಶಿಲೀಂಧ್ರನಾಶಕಗಳನ್ನು ಬೇಗನೆ ತೊಳೆದುಹಾಕುತ್ತದೆ, ಇದರಿಂದಾಗಿ ಮತ್ತೆ ಮತ್ತೆ ಔಷಧಿ ಸಿಂಪಡಿಸುವುದು ದುಬಾರಿಯಾಗುತ್ತದೆ ಮತ್ತು ಅದರ ಪರಿಣಾಮವೂ ಕಡಿಮೆಯಿರುತ್ತದೆ. ರಾಸಾಯನಿಕ ಸಿಂಪಡಣೆಗಿಂತ ರೋಗ ನಿರೋಧಕ ತಳಿಗಳನ್ನು ಬಳಸುವುದು ಹೆಚ್ಚು ನಂಬಿಕಸ್ಥ ವಿಧಾನವಾಗಿದೆ. ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ, ನಿಮ್ಮ ಪ್ರದೇಶಕ್ಕೆ ಶಿಫಾರಸು ಮಾಡಲಾದ ಶಿಲೀಂಧ್ರನಾಶಕಗಳನ್ನು ಮುಂಜಾಗ್ರತೆಯಾಗಿ ಬಳಸಿ. ಹವಾಮಾನವು ರೋಗ ಹರಡಲು ಪೂರಕವಾಗಿರುವಾಗ ಸಿಂಪಡಿಸಲು ಪ್ರಾರಂಭಿಸಿ. ಸಾಧ್ಯವಾದರೆ ಪ್ರತಿ ಬಾರಿ ಭಾರಿ ಮಳೆಯಾದ ನಂತರ ಮತ್ತೊಮ್ಮೆ ಔಷಧಿ ಸಿಂಪಡಿಸಿ. ಸೋಂಕು ಪ್ರಾರಂಭವಾಗುವ ಎಲೆಯ ಕೆಳಭಾಗಕ್ಕೆ ಔಷಧಿ ತಲುಪುವಂತೆ ಗಮನ ಹರಿಸಿ. ಔಷಧಿ ಚೆನ್ನಾಗಿ ತಗುಲಲು ಹೆಚ್ಚಿನ ಪ್ರಮಾಣದಲ್ಲಿ ಸಿಂಪಡಣೆ ಮಾಡಿ. ವೆಚ್ಚದ ಕಡೆಗೂ ಗಮನವಿರಲಿ - ಇದು ಸಣ್ಣ ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗದೇ ಇರಬಹುದು.

ಅದಕ್ಕೆ ಏನು ಕಾರಣ

ಈ ರೋಗವು ಫೈಟೊಪ್ಥೋರಾ ಕೊಲೊಕೇಸಿಯೆ ಎಂಬ ನೀರಿನ ಬೂಷ್ಟು ರೋಗಾಣುವಿನಿಂದ ಬರುತ್ತದೆ. ಇದು ತೇವಾಂಶವಿರುವ ವಾತಾವರಣದಲ್ಲಿ ವೇಗವಾಗಿ ಬೆಳೆಯುತ್ತದೆ. ಈ ರೋಗಾಣುವು ಮಳೆಯ ಹನಿಗಳು ಚಿಮ್ಮುವುದರಿಂದ ಮತ್ತು ಗಾಳಿಯೊಂದಿಗೆ ಬರುವ ಮಳೆಯ ಮೂಲಕ ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಹರಡುತ್ತದೆ. ಇದರ ಸಣ್ಣ ಬೀಜಕಗಳು ಎಲೆಗಳು ಮತ್ತು ಕಾಂಡಗಳ ಮೇಲೆ ಬಿದ್ದು, ಒದ್ದೆಯಾದ ವಾತಾವರಣದಲ್ಲಿ ಬೇಗನೆ ಮೊಳಕೆಯೊಡೆಯುತ್ತವೆ. ನೀರು ನಿಂತಿರುವ ಕೆಸು ಗೆಡ್ಡೆ ಹೊಲಗಳಲ್ಲಿ, ಆರೋಗ್ಯವಂತ ಗಿಡಗಳಿಗೆ ನೀರು ಬಿಜಕಗಳನ್ನು ಹೊತ್ತೊಯ್ಯುವುದರಿಂದ ಈ ರೋಗವು ಇನ್ನೂ ವೇಗವಾಗಿ ಹರಡುತ್ತದೆ. ಈ ರೋಗಕ್ಕೆ ಮಳೆ ಮತ್ತು ಬೆಚ್ಚಗಿನ ಹವಾಮಾನವು ಹೆಚ್ಚು ಪೂರಕವಾಗಿದೆ. ಗಾಳಿಯಲ್ಲಿ ತೇವಾಂಶ ಶೇಕಡಾ 90 ಕ್ಕಿಂತ ಹೆಚ್ಚಿದ್ದಾಗ ಮತ್ತು ತಾಪಮಾನವು 30°C ತಲುಪಿದಾಗ ಇದು ಅತ್ಯಂತ ವೇಗವಾಗಿ ಹರಡುತ್ತದೆ. ಈ ರೋಗಾಣುವು ಸಸ್ಯದ ಅಂಗಾಂಶಗಳಲ್ಲಿ ಮತ್ತು ಮಣ್ಣಿನಲ್ಲಿ ಬದುಕಬಲ್ಲದು, ಹಾಗಾಗಿ ಇದು ಒಮ್ಮೆ ಹೊಲಕ್ಕೆ ಬಂದರೆ ನಿಯಂತ್ರಿಸುವುದು ಕಷ್ಟ. ಇದು ಕೊಯ್ಲಿಲ್ಲದ ಸಮಯದಲ್ಲಿ ರೋಗಪೀಡಿತ ಗೆಡ್ಡೆಗಳಲ್ಲಿ ಬದುಕಿದ್ದು, ಮುಂದೆ ನೀವು ಅವುಗಳನ್ನು ಬಿತ್ತನೆ ಮಾಡಿದಾಗ ಹೊಸದಾಗಿ ಸೋಂಕನ್ನು ಉಂಟುಮಾಡುತ್ತದೆ. ಇದು ಕೆಸು ಗೆಡ್ಡೆ ಗಿಡದ ಜೊತೆಗೆ ಡಶೀನ್ (ಅರ್ವಿ) ಮತ್ತು ಅದರ ಜಾತಿಗೆ ಸೇರಿದ ಇತರ ಗಿಡಗಳ ಮೇಲೂ ದಾಳಿ ಮಾಡಿ, ಅಲ್ಲಿಂದ ರೋಗ ಹರಡಲು ಕಾರಣವಾಗುತ್ತದೆ. ಕೆಸು ಗೆಡ್ಡೆ ಎಲೆ ಕೊಳೆ ರೋಗವು ಪ್ರಪಂಚದಾದ್ಯಂತ ಕೆಸು ಗೆಡ್ಡೆ ಬೆಳೆಗೆ ಬರುವ ಅತ್ಯಂತ ವಿನಾಶಕಾರಿ ರೋಗವಾಗಿದೆ.


ಮುಂಜಾಗ್ರತಾ ಕ್ರಮಗಳು

  • ರೋಗಮುಕ್ತ ಬಿತ್ತನೆ ಸಾಮಗ್ರಿಗಳನ್ನು ಮತ್ತು ಲಭ್ಯವಿದ್ದಲ್ಲಿ ರೋಗ ನಿರೋಧಕ ತಳಿಗಳನ್ನು ಬಳಸಿ.
  • ನೀರು ನಿಲ್ಲುವುದನ್ನು ಕಡಿಮೆ ಮಾಡಲು ಹೊಲದ ನೀರು ಹರಿವಿನ ವ್ಯವಸ್ಥೆಯನ್ನು ಉತ್ತಮಗೊಳಿಸಿ.
  • ಹಿಂದೆಂದೂ ಕೆಸು ಗೆಡ್ಡೆಯ ಎಲೆ ಕೊಳೆಯ ರೋಗ ಬಾರದ ಹೊಲಗಳಲ್ಲಿ ಬಿತ್ತನೆ ಮಾಡಿ.
  • ರೋಗಪೀಡಿತ ಹೊಲಗಳಿಂದ ಗಾಳಿ ಬೀಸುವ ದಿಕ್ಕಿನಲ್ಲಿ ಗಿಡಗಳನ್ನು ನೆಡಬೇಡಿ.
  • ರೋಗ ಹರಡುವುದನ್ನು ನಿಧಾನಗೊಳಿಸಲು ಗಿಡಗಳ ನಡುವೆ ಹೆಚ್ಚಿನ ಅಂತರವಿಟ್ಟು ನೆಡಿ.
  • ಗಿಡಗಳು ಬೆಳೆಯುವ ಆರಂಭಿಕ ಹಂತದಲ್ಲಿ ವಾರಕ್ಕೆ ಎರಡು ಬಾರಿ ಹೊಲವನ್ನು ಪರಿಶೀಲಿಸಿ.
  • ರೋಗಪೀಡಿತ ಸಸ್ಯದ ಭಾಗಗಳನ್ನು ಕತ್ತರಿಸಿ ಚೀಲಗಳಲ್ಲಿ ಹಾಕಿ ಹೊಲದಿಂದ ದೂರ ಸಾಗಿಸಿ.
  • ಬೀಜಕಗಳು ಹರಡುವುದನ್ನು ತಡೆಯಲು ಎಲೆಗಳು ಸಂಪೂರ್ಣವಾಗಿ ಒಣಗಿರುವಾಗ ಕೊಯ್ಲು ಮಾಡಿ.
  • ಕೊಯ್ಲಿನ ನಂತರ ಉಳಿದ ಎಲ್ಲಾ ಸಸ್ಯದ ತ್ಯಾಜ್ಯವನ್ನು ಹೊಲದಿಂದ ತೆಗೆದುಹಾಕಿ.
  • ಕನಿಷ್ಠ 2 ವರ್ಷಗಳವರೆಗೆ ಬೇರೆ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ