ಎಲೆ ಬಲೆ ರೋಗ ಮತ್ತು ತುದಿ ಒಣಗುವ ರೋಗ

DURIAN

ಎಲೆ ಬಲೆ ರೋಗ ಮತ್ತು ತುದಿ ಒಣಗುವ ರೋಗ

Rhizoctonia solani

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನೀರಿನಿಂದ ನೆನೆದಂತಿರುವ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಇವು ವೇಗವಾಗಿ ಹರಡುತ್ತವೆ.
  • ರೋಗ ಪೀಡಿತ ಎಲೆಗಳು ಹೆಚ್ಚಾಗಿ ಒಂದಕ್ಕೊಂದು ಅಂಟಿಕೊಳ್ಳುತ್ತವೆ.
  • ಸೋಂಕಿತ ಎಲೆಗಳು ಹಳದಿಯಾಗಿ, ಒಣಗಿ, ಕೊನೆಗೆ ಉದುರಿಹೋಗುತ್ತವೆ.
  • ಎಳೆಯ ಚಿಗುರುಗಳು ಮತ್ತು ಕೊಂಬೆಗಳ ತುದಿಗಳು ಒಣಗಿ ಸತ್ತುಹೋಗುತ್ತವೆ (Dieback).
  • ಮಳೆಗಾಲದಲ್ಲಿ ಈ ರೋಗವು ಅತ್ಯಂತ ವೇಗವಾಗಿ ಹರಡುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಎಲೆ ಬಲೆ ರೋಗ ಮತ್ತು ತುದಿ ಒಣಗುವ ರೋಗ

DURIAN

ರೋಗಲಕ್ಷಣಗಳು

ಈ ರೋಗವು ಎಲೆಗಳ ಮೇಲೆ ಸಣ್ಣದಾದ, ನೀರು ತಗುಲಿದಂತಿರುವ ಕಂದು ಬಣ್ಣದ ಚುಕ್ಕೆಗಳಾಗಿ ಪ್ರಾರಂಭವಾಗುತ್ತದೆ. ಈ ಚುಕ್ಕೆಗಳು ದೊಡ್ಡದಾಗುತ್ತಾ ಎಲೆಯ ಉದ್ದಕ್ಕೂ, ಹೆಚ್ಚಾಗಿ ಎಲೆಯ ತುದಿ ಅಥವಾ ಅಂಚುಗಳಿಂದ ಹರಡುತ್ತವೆ. ಎಲೆಯ ಮೇಲ್ಭಾಗದಲ್ಲಿ ತಿಳಿ ಹಳದಿ ಅಥವಾ ಕಂದು ಬಣ್ಣದ ಶಿಲೀಂಧ್ರದ ಎಳೆಗಳು ಹರಡುವುದನ್ನು ನೀವು ಕಾಣಬಹುದು. ಈ ಎಳೆಗಳು ಅಂಟಿನಂತೆ ಕೆಲಸ ಮಾಡುತ್ತವೆ, ಇದರಿಂದ ರೋಗ ತಗುಲಿದ ಎಲೆಗಳು ಗುಂಪಾಗಿ ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಸೋಂಕು ಹೆಚ್ಚಾದಂತೆ, ಎಲೆಗಳು ಹಳದಿಯಾಗಿ, ನಂತರ ಕಂದು ಬಣ್ಣಕ್ಕೆ ತಿರುಗಿ, ಕೊನೆಗೆ ಒಣಗಿ ಸತ್ತುಹೋಗುತ್ತವೆ. ಎಳೆಯ ಮರಗಳಲ್ಲಿ, ಚಿಗುರಿನ ತುದಿಗಳು "ಸುಟ್ಟಂತೆ" ಕಾಣುತ್ತವೆ ಮತ್ತು ಉದುರಿಹೋಗುತ್ತವೆ. ದೊಡ್ಡ ಮರಗಳಲ್ಲಿ, ಎಳೆಯ ಎಲೆಗಳು ಉದುರುವುದರಿಂದ ಕೊಂಬೆಗಳ ತುದಿಗಳು ಒಣಗುತ್ತವೆ. ಇದು ಮರವು ಉತ್ತಮ ಇಳುವರಿ ನೀಡುವುದನ್ನು ತಡೆಯಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪರಿಸರ ಸ್ನೇಹಿ ಆಯ್ಕೆಗಳಲ್ಲಿ ಉಪಕಾರಿ ಶಿಲೀಂಧ್ರಗಳು (ಉದಾಹರಣೆಗೆ ಟ್ರೈಕೋಡರ್ಮಾ ಪ್ರಭೇದಗಳು) ಅಥವಾ ಬ್ಯಾಕ್ಟೀರಿಯಾಗಳನ್ನು (ಉದಾಹರಣೆಗೆ ಬೆಸಿಲಸ್ ಸಬ್ಟಿಲಿಸ್) ಬಳಸುವುದು ಸೇರಿದೆ. ಈ "ಒಳ್ಳೆಯ" ಸೂಕ್ಷ್ಮಾಣುಜೀವಿಗಳನ್ನು ಎಲೆಗಳ ಮೇಲೆ ಸಿಂಪಡಿಸಬಹುದು ಅಥವಾ ಮಣ್ಣಿಗೆ ಹಾಕಬಹುದು; ಇವು ರೋಗ ತರುವ ಶಿಲೀಂಧ್ರದೊಂದಿಗೆ ಆಹಾರ ಮತ್ತು ಜಾಗಕ್ಕಾಗಿ ಪೈಪೋಟಿ ನಡೆಸುತ್ತವೆ. ಅಲ್ಲದೆ, ಇವು ರೋಗಕಾರಕ ಶಿಲೀಂಧ್ರದ ಮೇಲೆ ಸ್ವಾಭಾವಿಕವಾಗಿ ದಾಳಿ ಮಾಡಿ ಅದು ಬೆಳೆಯದಂತೆ ತಡೆಯುತ್ತವೆ. ಮರಗಳು ಮತ್ತು ಮಣ್ಣನ್ನು ಆರೋಗ್ಯವಾಗಿಡಲು ಈ ಜೈವಿಕ ಚಿಕಿತ್ಸೆಗಳನ್ನು ಋತುವಿನ ಆರಂಭದಲ್ಲೇ ಒಂದು ಯೋಜಿತ ಕ್ರಮವಾಗಿ ಬಳಸಿದರೆ ಅತ್ಯುತ್ತಮ ಫಲಿತಾಂಶ ಸಿಗುತ್ತದೆ.

ರಾಸಾಯನಿಕ ನಿಯಂತ್ರಣ

ಮಳೆಗಾಲ ಆರಂಭವಾಗುವ ಮೊದಲು ಅಥವಾ ರೋಗದ ಲಕ್ಷಣಗಳು ಕಂಡ ತಕ್ಷಣ ಎಲೆಗಳನ್ನು ರಕ್ಷಿಸುವುದು, ರಾಸಾಯನಿಕ ನಿರ್ವಹಣೆಯ ಮುಖ್ಯ ಉದ್ದೇಶವಾಗಿದೆ. ಶಿಲೀಂಧ್ರವು ಹರಡದಂತೆ ತಡೆಯಲು ಎಲೆಗಳು ಮತ್ತು ಎಳೆಯ ಕೊಂಬೆಗಳ ಮೇಲೆ ರಕ್ಷಣಾ ಕವಚದಂತೆ ಔಷಧಗಳನ್ನು ಸಿಂಪಡಿಸಬೇಕು. ಈ ಶಿಲೀಂಧ್ರವು ಮಣ್ಣಿನಲ್ಲಿ ಮತ್ತು ಸಸ್ಯದ ತ್ಯಾಜ್ಯಗಳಲ್ಲಿ ವಾಸಿಸುವುದರಿಂದ, ರೋಗವು ಎಲ್ಲಿಂದ ಪ್ರಾರಂಭವಾಗುತ್ತದೆಯೋ ಆ ಜಾಗಗಳನ್ನು ಗುರಿಯಾಗಿಸಿಕೊಂಡು ಔಷಧೋಪಚಾರ ಮಾಡುವುದು ಮುಖ್ಯವಾಗಿದೆ. ಕಾಲಕ್ರಮೇಣ ಶಿಲೀಂಧ್ರವು ಈ ನಿಯಂತ್ರಣ ಕ್ರಮಗಳ ವಿರುದ್ಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳದಂತೆ ತಡೆಯಲು, ವರ್ಷವಿಡೀ ವಿವಿಧ ರೀತಿಯ ನಿರ್ವಹಣಾ ವಿಧಾನಗಳನ್ನು ಬಳಸುವುದು ಪ್ರಯೋಜನಕಾರಿ.

ಅದಕ್ಕೆ ಏನು ಕಾರಣ

ಈ ರೋಗವು ಮಣ್ಣಿನಲ್ಲಿ ಮತ್ತು ಹಳೆಯ ಸಸ್ಯದ ತ್ಯಾಜ್ಯಗಳಲ್ಲಿ ವಾಸಿಸುವ ಶಿಲೀಂಧ್ರದಿಂದ ಉಂಟಾಗುತ್ತದೆ. ಮಳೆಹನಿಗಳು ನೆಲದ ಮೇಲೆ ಅಥವಾ ಹಳೆಯ ಎಲೆಗಳ ಮೇಲೆ ಬಿದ್ದಾಗ, ಶಿಲೀಂಧ್ರವು ಚಿಮ್ಮಿ ಹೊಸ ಮತ್ತು ಆರೋಗ್ಯಕರ ಎಲೆಗಳಿಗೆ ಹರಡುತ್ತದೆ. ಬೆಚ್ಚಗಿನ ವಾತಾವರಣ ಮತ್ತು ಅತಿಯಾದ ತೇವಾಂಶವಿದ್ದರೆ ಈ ಶಿಲೀಂಧ್ರವು ವೇಗವಾಗಿ ಬೆಳೆಯುತ್ತದೆ. ಆದ್ದರಿಂದ ಮಳೆಗಾಲವು ತೋಟಕ್ಕೆ ಅತ್ಯಂತ ಅಪಾಯಕಾರಿ ಸಮಯವಾಗಿದೆ. ದಟ್ಟವಾಗಿ ಬೆಳೆದಿರುವ ಮರದ ಎಲೆಗಳು ಒಂದಕ್ಕೊಂದು ತಗುಲಿದಾಗಲೂ ಈ ರೋಗ ಹರಡುತ್ತದೆ. ಮಣ್ಣಿನಲ್ಲಿ ಸಾರಜನಕದ ಪ್ರಮಾಣ ಹೆಚ್ಚಾದಾಗ ಗಿಡದ ಅಂಗಾಂಶಗಳು ತುಂಬಾ ಮೃದುವಾಗಿ ಬೆಳೆಯುತ್ತವೆ. ಇಂತಹ ಮೃದುವಾದ ಭಾಗಗಳನ್ನು ಶಿಲೀಂಧ್ರವು ಸುಲಭವಾಗಿ ಪ್ರವೇಶಿಸಬಲ್ಲದು. ಇದರಿಂದ ಮರಕ್ಕೆ ಬೇಗನೆ ರೋಗ ತಗುಲುತ್ತದೆ. ತೋಟದಲ್ಲಿ ಸರಿಯಾಗಿ ರೆಂಬೆಗಳನ್ನು ಕತ್ತರಿಸದಿದ್ದರೆ ಅಥವಾ ನೀರು ಬಸಿಯಲು ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ, ಅಲ್ಲಿನ ತೇವಭರಿತ ಗಾಳಿಯು ಶಿಲೀಂಧ್ರವು ಇನ್ನೂ ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಎಲೆಗಳು ಒಂದಕ್ಕೊಂದು ಅತಿಯಾಗಿ ತಗುಲದಂತೆ ಸಸಿಗಳನ್ನು ನೆಡುವಾಗ ಸರಿಯಾದ ಅಂತರ ಬಿಡಿ.
  • ತೋಟದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಉತ್ತಮ ಕಾಲುವೆ ವ್ಯವಸ್ಥೆ ಮಾಡಿ.
  • ಮರಗಳಿಗೆ ಸರಿಯಾದ ಪ್ರಮಾಣದಲ್ಲಿ ಗೊಬ್ಬರ ನೀಡಿ ಮತ್ತು ಅತಿಯಾದ ಸಾರಜನಕ ಗೊಬ್ಬರ ಬೇಡ.
  • ಮಣ್ಣಿನಿಂದ ಶಿಲೀಂಧ್ರಗಳು, ರೋಗದ ಕಣಗಳು ಚಿಮ್ಮಿ ಎಲೆಗಳಿಗೆ ತಗುಲದಂತೆ ಮರದ ಬುಡದ ಸುತ್ತ ಒಣಗಿದ ಕಸದ ಹೊದಿಕೆ ಬಳಸಿ.
  • ಗಾಳಿಯ ಸಂಚಾರಕ್ಕೆ ಮತ್ತು ಎಲೆಗಳು ಬೇಗ ಒಣಗಲು ಮರದ ರೆಂಬೆಗಳನ್ನು ನಿಯಮಿತವಾಗಿ ಕತ್ತರಿಸಿ.
  • ಒಂದು ಮರದಿಂದ ಇನ್ನೊಂದಕ್ಕೆ ಹೋಗುವ ಮೊದಲು ಉಪಕರಣಗಳನ್ನು ಸೋಂಕುನಾಶಕದಿಂದ ಸ್ವಚ್ಛಗೊಳಿಸಿ.
  • ಮಳೆಗಾಲದಲ್ಲಿ ರೋಗದ ಮೊದಲ ಚಿನ್ಹೆಗಳಾದ ಕಂದು ಚುಕ್ಕೆಗಳು ಅಥವಾ ಅಂಟಿಕೊಂಡಿರುವ ಎಲೆಗಳಿವೆಯೇ ಎಂದು ತೋಟವನ್ನು ಪದೇ ಪದೇ ಪರೀಕ್ಷಿಸಿ.
  • ಶಿಲೀಂಧ್ರವನ್ನು ತೊಲಗಿಸಲು ರೋಗ ತಗುಲಿದ ಕೊಂಬೆಗಳು ಮತ್ತು ಬಿದ್ದ ಎಲೆಗಳನ್ನು ತೆಗೆದು ಸುಟ್ಟುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ