ಕ್ಯಾರೆಟ್‌ನ ಬ್ಲೈಟ್ ರೋಗ (ಕ್ಯಾರೆಟ್ ಎಲೆ ಮುದುಡು ರೋಗ)

ಕ್ಯಾರೆಟ್

ಕ್ಯಾರೆಟ್‌ನ ಬ್ಲೈಟ್ ರೋಗ (ಕ್ಯಾರೆಟ್ ಎಲೆ ಮುದುಡು ರೋಗ)

Alternaria dauci

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳ ಅಂಚು ಮತ್ತು ತುದಿಗಳಲ್ಲಿ ಕಡು ಕಂದು ಅಥವಾ ಕಪ್ಪು ಬಣ್ಣದ ಕಲೆಗಳು ಕಾಣಿಸಿಕೊಳ್ಳುವುದು.
  • ಎಲೆಗಳು ಸುಟ್ಟಂತೆ ಮತ್ತು ಒಣಗಿದಂತೆ ಕಾಣಿಸುವುದು.
  • ಕೆಳಗಿನ ಹಳೆಯ ಎಲೆಗಳಿಗೆ ಮೊದಲು ಈ ರೋಗ ತಗುಲುವುದು.
  • ಎಲೆ ತೊಟ್ಟುಗಳು ಒಣಗಿ ಸಾಯುವುದರಿಂದ ಎಲೆಗಳು ಮುದುಡಿ ಬೀಳುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಕ್ಯಾರೆಟ್

ಕ್ಯಾರೆಟ್‌ನ ಬ್ಲೈಟ್ ರೋಗ (ಕ್ಯಾರೆಟ್ ಎಲೆ ಮುದುಡು ರೋಗ)

ಕ್ಯಾರೆಟ್

ರೋಗಲಕ್ಷಣಗಳು

ರೋಗದ ಆರಂಭಿಕ ಲಕ್ಷಣಗಳು ಕೆಳಗಿನ ಹಳೆಯ ಎಲೆಗಳ ಅಂಚು ಮತ್ತು ತುದಿಗಳಲ್ಲಿ ಸಣ್ಣದಾದ, ಅಸಮರ್ಪಕ ಆಕಾರದ ಕಡು ಕಂದು ಅಥವಾ ಕಪ್ಪು ಕಲೆಗಳಾಗಿ ಕಾಣಿಸಿಕೊಳ್ಳುತ್ತವೆ. ಈ ಕಲೆಗಳು ವಿಭಿನ್ನ ಗಾತ್ರದಲ್ಲಿದ್ದು, ಅವುಗಳ ಸುತ್ತಲೂ ಹಳದಿ ಬಣ್ಣದ ವಲಯವಿರಬಹುದು. ಸಮಯ ಕಳೆದಂತೆ, ಈ ಕಲೆಗಳು ವಿಸ್ತರಿಸಿ ಒಂದಕ್ಕೊಂದು ಸೇರಿಕೊಳ್ಳುವುದರಿಂದ ಎಲೆಯು ಸುಟ್ಟಂತೆ ಕಾಣುತ್ತದೆ. ತೀವ್ರವಾಗಿ ರೋಗ ತಗುಲಿದ ಎಲೆಗಳು ಮುದುಡಿ ಸತ್ತುಹೋಗುತ್ತವೆ. ರೋಗ ಉಲ್ಬಣಗೊಂಡ ಹಂತದಲ್ಲಿ, ಎಲೆ ತೊಟ್ಟುಗಳ ಮೇಲೂ ದೊಡ್ಡ ಕಲೆಗಳು ಬೆಳೆದು ಅವುಗಳನ್ನು ಸಂಪೂರ್ಣವಾಗಿ ಆವರಿಸುತ್ತವೆ ಮತ್ತು ಎಲೆಗಳು ಮುರಿದು ಬೀಳುವಂತೆ ಮಾಡುತ್ತವೆ. ಕೆಲವು ಬಾರಿ, ಈ ರೋಗಾಣುವು ಸಣ್ಣ ಸಸಿಗಳ ಮಣ್ಣಿನ ಮಟ್ಟದಲ್ಲಿ ಅಥವಾ ಮಣ್ಣಿನ ಅಡಿಯಲ್ಲಿ ಸೋಂಕು ಉಂಟುಮಾಡಿ, ಸಸಿಗಳು ಕೊಳೆತು ಸಾಯಲು ಕಾರಣವಾಗುತ್ತದೆ. ಯಂತ್ರಗಳ ಮೂಲಕ ಕೊಯ್ಲು ಮಾಡುವಾಗ ರೋಗಪೀಡಿತ ಎಲೆ ತೊಟ್ಟುಗಳು ಸುಲಭವಾಗಿ ಮುರಿದುಹೋಗುತ್ತವೆ, ಇದರಿಂದಾಗಿ ಕ್ಯಾರೆಟ್ ಗೆಡ್ಡೆಗಳು ಮಣ್ಣಿನಲ್ಲೇ ಉಳಿದುಕೊಳ್ಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಶಿಲೀಂಧ್ರ ರೋಗಕ್ಕೆ ಮುಂಜಾಗ್ರತೆಯಾಗಿ ಚಿಕಿತ್ಸೆ ನೀಡಿ. ತಾಮ್ರ ಆಧಾರಿತ ಉತ್ಪನ್ನಗಳು ಈ ರೋಗದ ಮೇಲೆ ಉತ್ತಮ ಪರಿಣಾಮ ಬೀರಿವೆ ಮತ್ತು ಕೆಲವು ಅಧ್ಯಯನಗಳ ಪ್ರಕಾರ ಟ್ರೈಕೋಡರ್ಮಾ ಹಾಗೂ ಬ್ಯಾಸಿಲ್ಲಸ್ ಜೀವಿಗಳು ಈ ಶಿಲೀಂಧ್ರದ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಎಲ್ಲಾ ಜೈವಿಕ ನಿಯಂತ್ರಣಗಳಂತೆ, ಇದರ ಪರಿಣಾಮಕಾರಿತನವು ಕ್ಯಾರೆಟ್ ತಳಿ ಮತ್ತು ಪರಿಸರದ ವಾತಾವರಣಕ್ಕೆ ಅನುಗುಣವಾಗಿ ಬದಲಾಗಬಹುದು. ಉತ್ತಮ ಫಲಿತಾಂಶಕ್ಕಾಗಿ ಯಾವಾಗಲೂ ಜೈವಿಕ ಚಿಕಿತ್ಸೆಗಳನ್ನು ಕೃಷಿ ಪದ್ಧತಿಗಳು ಮತ್ತು ತಡೆಗಟ್ಟುವ ಕ್ರಮಗಳೊಂದಿಗೆ ಸಂಯೋಜಿಸಿ ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳನ್ನು ಒಳಗೊಂಡ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗದ ಆರಂಭಿಕ ಲಕ್ಷಣಗಳು ಕಂಡುಬಂದ ತಕ್ಷಣ ಅಥವಾ ರೋಗವು ಸಾಮಾನ್ಯವಾಗಿ ಬರುವಂತಹ ಅಧಿಕ ತೇವಾಂಶವಿರುವ ಪ್ರದೇಶಗಳಲ್ಲಿ ರೋಗ ಬರುವ ಮುನ್ನವೇ ಶಿಲೀಂಧ್ರನಾಶಕಗಳನ್ನು ಬಳಸಲು ಪ್ರಾರಂಭಿಸಬೇಕು. ಬೆಳೆ ಬೆಳೆದು ಎಲೆಗಳು ಹರಡಿಕೊಂಡಂತೆಲ್ಲಾ ಗಿಡದ ಎಲ್ಲಾ ಭಾಗಗಳಿಗೆ ಔಷಧಿ ತಲುಪುವುದು ಕಷ್ಟವಾಗುತ್ತದೆ, ಆದ್ದರಿಂದ ಆರಂಭಿಕ ಹಂತದಲ್ಲೇ ಔಷಧಿ ಸಿಂಪಡಿಸುವುದು ಹೆಚ್ಚು ಪರಿಣಾಮಕಾರಿಯಾಗಿದೆ. ಕೀಟಗಳು ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುವ ಅಪಾಯವನ್ನು ಕಡಿಮೆ ಮಾಡಲು ಶಿಲೀಂಧ್ರನಾಶಕಗಳ ವರ್ಗಗಳನ್ನು ಬದಲಾಯಿಸುತ್ತಾ ಇರಿ. ಅಧಿಕೃತ ಶಿಲೀಂಧ್ರನಾಶಕಗಳ ಜೊತೆಗೆ ತಾಮ್ರ ಆಧಾರಿತ ಉತ್ಪನ್ನಗಳನ್ನು ಸಹ ಬದಲಾಯಿಸುತ್ತಾ ಬಳಸಬಹುದು; ಇವು ಆಲ್ಟರ್ನೇರಿಯಾ ಎಲೆ ಮುದುಡು ರೋಗದ ವಿರುದ್ಧ ಉತ್ತಮ ಫಲಿತಾಂಶ ನೀಡುವುದಲ್ಲದೆ, ಬ್ಯಾಕ್ಟೀರಿಯಾದಿಂದ ಬರುವ ಎಲೆ ಮುದುಡು ರೋಗವನ್ನು ತಡೆಯಲು ಸಹಾಯ ಮಾಡುತ್ತವೆ.

ಅದಕ್ಕೆ ಏನು ಕಾರಣ

ಈ ರೋಗವು ಆಲ್ಟರ್ನೇರಿಯಾ ಡಾಸಿ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದು ರೋಗಪೀಡಿತ ಅಥವಾ ಕಲುಷಿತ ಬೀಜಗಳ ಮೂಲಕ ಹರಡಬಹುದು ಮತ್ತು ಕೊಯ್ಲಿನ ನಂತರ ಹೊಲದಲ್ಲಿ ಉಳಿಯುವ ಸಸ್ಯದ ತ್ಯಾಜ್ಯ ಹಾಗೂ ತಾನಾಗಿಯೇ ಬೆಳೆಯುವ ಕ್ಯಾರೆಟ್ ಗಿಡಗಳ ಮೇಲೆ ಚಳಿಗಾಲವನ್ನು ಕಳೆಯಬಲ್ಲದು. ಬದುಕಿರುವ ಸಸ್ಯದ ಭಾಗಗಳಿಲ್ಲದೆ ಈ ಶಿಲೀಂಧ್ರವು ಮಣ್ಣಿನಲ್ಲಿ ಬದುಕಲಾರದು. ಶಿಲೀಂಧ್ರದ ಬಿಜಕಗಳು ಗಾಳಿಯ ಮೂಲಕ ಹರಡುತ್ತವೆ ಹಾಗೂ ಮಳೆ ಅಥವಾ ಗಿಡಗಳ ಮೇಲಿಂದ ನೀರು ಹರಿಸುವಾಗ ಚಿಮ್ಮುವ ಹನಿಗಳ ಮೂಲಕ ಪಕ್ಕದ ಗಿಡಗಳಿಗೆ ಹರಡುತ್ತವೆ. ಇವು ಗಾಳಿ ಮತ್ತು ಕೃಷಿ ಉಪಕರಣಗಳ ಮೂಲಕ ಸುಲಭವಾಗಿ ದೂರದ ಪ್ರದೇಶಗಳಿಗೂ ಹರಡಬಲ್ಲವು. ಸಾಧಾರಣದಿಂದ ಬೆಚ್ಚಗಿನ ತಾಪಮಾನ (16-35°C) ಮತ್ತು ಎಲೆಗಳ ಮೇಲೆ ದೀರ್ಘಕಾಲದ ತೇವಾಂಶ ಇರುವುದು ಈ ಸೋಂಕು ಹರಡಲು ಅನುಕೂಲಕರ ವಾತಾವರಣವಾಗಿದೆ. ಸಾಮಾನ್ಯವಾಗಿ, ಬಿಜಕಗಳು ಮೊಳಕೆಯೊಡೆದು ಗಿಡಕ್ಕೆ ಸೋಂಕು ತಗುಲಿಸಲು ಕೇವಲ 8 ರಿಂದ 12 ಗಂಟೆಗಳ ಕಾಲ ಎಲೆಗಳ ಮೇಲೆ ತೇವಾಂಶ ಇದ್ದರೆ ಸಾಕು. ತಾಪಮಾನ ಹೆಚ್ಚಾದಂತೆಲ್ಲಾ, ಸೋಂಕು ಉಂಟಾಗಲು ಬೇಕಾಗುವ ತೇವಾಂಶದ ಸಮಯವು ಕಡಿಮೆಯಾಗುತ್ತದೆ. ಸರಿಯಾಗಿ ಗೊಬ್ಬರ ನೀಡದ ಮತ್ತು ಒತ್ತಡಕ್ಕೆ ಒಳಗಾದ ಗಿಡಗಳಲ್ಲಿ ಈ ರೋಗದ ತೀವ್ರತೆಯು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ, ರೋಗಮುಕ್ತ ಬೀಜಗಳನ್ನು ಮತ್ತು ಲಭ್ಯವಿದ್ದಲ್ಲಿ ರೋಗ ನಿರೋಧಕ ತಳಿಗಳನ್ನು ಬಳಸಿ.
  • ಗಾಳಿಯ ಚಲನೆಯನ್ನು ಉತ್ತಮಗೊಳಿಸಲು ಮತ್ತು ಎಲೆಗಳ ಮೇಲೆ ತೇವಾಂಶ ಇರುವ ಸಮಯವನ್ನು ಕಡಿಮೆ ಮಾಡಲು ಗಿಡಗಳ ನಡುವೆ ಹೆಚ್ಚಿನ ಅಂತರವನ್ನು ಹಾಗೂ ಎತ್ತರಿಸಿದ ಪಾತಿಗಳನ್ನು ಬಳಸಿ.
  • ಗಿಡಗಳ ಮೇಲಿಂದ ನೀರು ಹರಿಸಬೇಡಿ; ಒಂದು ವೇಳೆ ತಪ್ಪಿಸಲಾಗದಿದ್ದರೆ, ಎಲೆಗಳು ಬೇಗನೆ ಒಣಗುವಂತೆ ಹಗಲಿನ ವೇಳೆಯಲ್ಲಿ ನೀರು ಹಾಯಿಸಿ.
  • ಸಮರ್ಪಕವಾಗಿ ಗೊಬ್ಬರ ನೀಡುವುದನ್ನು ಮುಂದುವರಿಸಿ.
  • ಸರಿಯಾದ ಸಮಯಕ್ಕೆ ಕೊಯ್ಲು ಮಾಡಿ ಮತ್ತು ಕೊಯ್ಲಿನ ನಂತರ ಉಳಿದ ಸಸ್ಯದ ತ್ಯಾಜ್ಯವನ್ನು ತಕ್ಷಣವೇ ಮಣ್ಣಿನಲ್ಲಿ ಸೇರಿಸಿ.
  • ರೋಗದ ಅಪಾಯವನ್ನು ಕಡಿಮೆ ಮಾಡಲು ಕನಿಷ್ಠ ಎರಡು ವರ್ಷಗಳವರೆಗೆ ಬೇರೆ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ