ಸೂರ್ಯಕಾಂತಿಯ ವರ್ಟಿಸಿಲಿಯಮ್ ವಿಲ್ಟ್ (ಸೊರಗು ರೋಗ)

ಸೂರ್ಯಕಾಂತಿ

ಸೂರ್ಯಕಾಂತಿಯ ವರ್ಟಿಸಿಲಿಯಮ್ ವಿಲ್ಟ್ (ಸೊರಗು ರೋಗ)

Verticillium dahliae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಕೆಳಗಿನ ಎಲೆಗಳಿಂದ ಆರಂಭವಾಗಿ ಮೇಲಿನವರೆಗೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ.
  • ಸಾಮಾನ್ಯವಾಗಿ ಗಿಡದ ಒಂದು ಬದಿಯ ಎಲೆಗಳು ಮೊದಲು ಹಳದಿಯಾಗುತ್ತವೆ.
  • ಕಾಂಡವನ್ನು ಕತ್ತರಿಸಿ ನೋಡಿದಾಗ ಒಳಭಾಗದಲ್ಲಿ ಕಂದು ಬಣ್ಣ ಕಾಣಿಸುತ್ತವೆ.
  • ಗಿಡದ ಬೆಳವಣಿಗೆ ಕುಂಠಿತವಾಗಿ, ಗಿಡವು ಅಕಾಲಿಕವಾಗಿ ಸಾಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಸೂರ್ಯಕಾಂತಿಯ ವರ್ಟಿಸಿಲಿಯಮ್ ವಿಲ್ಟ್ (ಸೊರಗು ರೋಗ)

ಸೂರ್ಯಕಾಂತಿ

ರೋಗಲಕ್ಷಣಗಳು

ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಕೆಳಗಿನ ಎಲೆಗಳಿಂದ ಪ್ರಾರಂಭವಾಗುತ್ತದೆ. ಲಕ್ಷಣಗಳು ಹೆಚ್ಚಾಗಿ ಗಿಡದ ಒಂದು ಬದಿಯಲ್ಲಿ ಅಥವಾ ಎಲೆಯ ಅರ್ಧ ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ನೀರು ಕೊಟ್ಟರೂ ಸಹ ಪೀಡಿತ ಗಿಡಗಳು ಹಗಲಿನಲ್ಲಿ ಬಾಡಿದಂತೆ ಕಾಣುತ್ತವೆ. ಗಿಡ ಬೆಳೆದಂತೆ ಕಾಂಡದ ಮೇಲೆ ಮತ್ತು ಒಳಭಾಗದಲ್ಲಿ ಸಣ್ಣ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳಬಹುದು. ತೀವ್ರವಾಗಿ ಸೋಂಕಿತಗೊಂಡ ಗಿಡಗಳು ಆರೋಗ್ಯವಂತ ಗಿಡಗಳಿಗಿಂತ ಮೊದಲೇ ಬೆಳೆದು, ಒಣಗಿ ಸಾಯುತ್ತವೆ. ಇದರಿಂದ ಇಳುವರಿ ಮತ್ತು ಬೀಜದ ಗುಣಮಟ್ಟ ಕುಸಿಯುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಪ್ರಸ್ತುತ ಯಾವುದೇ ಸಂಪೂರ್ಣ ಪರಿಣಾಮಕಾರಿ ಜೈವಿಕ ನಿಯಂತ್ರಣ ಕ್ರಮಗಳು ಲಭ್ಯವಿಲ್ಲ. ಮಣ್ಣಿಗೆ ಕಾಂಪೋಸ್ಟ್‌ನಂತಹ ಸಾವಯವ ಪದಾರ್ಥಗಳನ್ನು ಸೇರಿಸುವುದರಿಂದ ರೋಗಕಾರಕಗಳನ್ನು ತಡೆಯುವ ಉಪಕಾರಿ ಸೂಕ್ಷ್ಮಜೀವಿಗಳ ಚಟುವಟಿಕೆ ಹೆಚ್ಚಿಸಬಹುದು. ಸೋಲರೈಸೇಷನ್: ಅತಿ ಹೆಚ್ಚು ಬಿಸಿಲಿರುವ ಸಮಯದಲ್ಲಿ ಒದ್ದೆಯಾದ ಮಣ್ಣನ್ನು ಪ್ಲಾಸ್ಟಿಕ್‌ನಿಂದ ಮುಚ್ಚುವುದರ ಮೂಲಕ ಮಣ್ಣಿನ ಮೇಲ್ಪದರದಲ್ಲಿರುವ ಶಿಲೀಂಧ್ರಗಳನ್ನು ನಾಶಪಡಿಸಬಹುದು.

ರಾಸಾಯನಿಕ ನಿಯಂತ್ರಣ

ಒಮ್ಮೆ ಗಿಡಕ್ಕೆ ಸೋಂಕು ತಗುಲಿದ ಮೇಲೆ ಅದನ್ನು ಗುಣಪಡಿಸಲು ಯಾವುದೇ ಸಂಪೂರ್ಣ ಪರಿಣಾಮಕಾರಿ ಶಿಲೀಂಧ್ರನಾಶಕಗಳಿಲ್ಲ. ಹಾಗಾಗಿ ವರ್ಟಿಸಿಲಿಯಮ್ ವಿಲ್ಟ್‌ಗೆ ರಾಸಾಯನಿಕ ನಿಯಂತ್ರಣದ ಆಯ್ಕೆಗಳು ಸೀಮಿತವಾಗಿವೆ. ಬಿತ್ತನೆ ಮಾಡುವ ಮೊದಲು ಶಿಲೀಂದ್ರ ನಾಶಕಗಳ ಮೂಲಕ ಬೀಜೋಪಚಾರ ಮಾಡುವುದು ಸಹಾಯಕಾರಿಯಾಗಬಹುದು. ರೋಗವು ಮಣ್ಣಿನಿಂದ ಹರಡುವುದರಿಂದ ಎಲೆಗಳ ಮೇಲೆ ಸಿಂಪಡಿಸುವ ಔಷಧಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ, ಚಿಕಿತ್ಸೆಗಳನ್ನು ಬಿತ್ತನೆ ಸಮಯದಲ್ಲೇ ಮಾಡಿ. ರಾಸಾಯನಿಕ ನಿಯಂತ್ರಣವನ್ನು ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳ ಜೊತೆ ಪೂರಕವಾಗಿ ಮಾತ್ರ ಬಳಸಬೇಕು, ಏಕೈಕ ಪರಿಹಾರವಾಗಿ ಅಲ್ಲ.

ಅದಕ್ಕೆ ಏನು ಕಾರಣ

ಇದು ಮಣ್ಣಿನಲ್ಲಿ ವಾಸಿಸುವ 'ವರ್ಟಿಸಿಲಿಯಮ್ ಡಹ್ಲಿಯಾ' ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ಶಿಲೀಂಧ್ರವು ಆಶ್ರಯದಾತ ಗಿಡವಿಲ್ಲದಿದ್ದರೂ ಮಣ್ಣಿನಲ್ಲಿ ಬದುಕಬಲ್ಲದು. ಇದು ಬೇರುಗಳ ಮೂಲಕ ಗಿಡವನ್ನು ಪ್ರವೇಶಿಸಿ ನೀರಿನ ಸಂಚಾರವನ್ನು ತಡೆಯುತ್ತದೆ. ಮಣ್ಣು, ಉಪಕರಣಗಳು, ಬೆಳೆಯ ಅವಶೇಷಗಳು ಮತ್ತು ಬೀಜಗಳ ಮೂಲಕ ಇದು ಹರಡುತ್ತದೆ. ತಂಪಾದ ಮಣ್ಣಿನ ತಾಪಮಾನ (15°C ನಿಂದ 25°C), ಬೆಳೆಯ ಆರಂಭದ ಹಂತದಲ್ಲಿ ಮಣ್ಣಿನಲ್ಲಿ ಹೆಚ್ಚಿನ ತೇವಾಂಶ ಮತ್ತು ನಂತರದ ಒಣ ಹವಾಮಾನ ಹಾಗು ಸಾವಯವ ವಸ್ತುಗಳಿಲ್ಲದ ಹಗುರ ಮಣ್ಣು ಈ ರೋಗ ಹರಡಲು ಪೂರಕವಾಗಿವೆ.


ಮುಂಜಾಗ್ರತಾ ಕ್ರಮಗಳು

  • ದೃಢೀಕೃತ, ರೋಗಮುಕ್ತ ಬಿತ್ತನೆ ಬೀಜಗಳನ್ನು ಬಳಸಿ ಮತ್ತು ವರ್ಟಿಸಿಲಿಯಮ್ ವಿಲ್ಟ್‌ ರೋಗ ನಿರೋಧಕ ಶಕ್ತಿಯಿರುವ ತಳಿಗಳನ್ನು ಆಯ್ಕೆ ಮಾಡಿ.
  • ಕನಿಷ್ಠ ಮೂರರಿಂದ ನಾಲ್ಕು ವರ್ಷಗಳ ಕಾಲ ಧಾನ್ಯಗಳಂತಹ ಆಶ್ರಯದಾತವಲ್ಲದ ಬೆಳೆಗಳನ್ನು ಸರದಿ ಬೆಳೆಯಾಗಿ ಬೆಳೆಯಿರಿ; ಆಲೂಗಡ್ಡೆ, ಟೊಮೆಟೊ, ಹತ್ತಿ ಮತ್ತು ಸ್ಟ್ರಾಬೆರಿಯಂತಹ ಈ ರೋಗಕ್ಕೆ ತುತ್ತಾಗುವ ಬೆಳೆಗಳನ್ನು ಬೆಳೆಯಬೇಡಿ.
  • ಕೊಯ್ಲಿನ ನಂತರ ಹೊಲದಲ್ಲಿನ ಬೆಳೆಯ ಅವಶೇಷಗಳನ್ನು ನಾಶಪಡಿಸಿ.
  • ಒಂದು ಹೊಲದಿಂದ ಮತ್ತೊಂದು ಹೊಲಕ್ಕೆ ಕೃಷಿ ಉಪಕರಣಗಳನ್ನು ಕೊಂಡೊಯ್ಯುವ ಮೊದಲು ಅವುಗಳನ್ನು ಸ್ವಚ್ಛಗೊಳಿಸಿ.
  • ಹೊಲದಲ್ಲಿ ನೀರು ನಿಲ್ಲದಂತೆ ಉತ್ತಮ ಚರಂಡಿ ವ್ಯವಸ್ಥೆ ಮಾಡಿ ಮತ್ತು ಅತಿಯಾದ ಸಾರಜನಕ ಗೊಬ್ಬರ ಬಳಕೆಯನ್ನು ತಪ್ಪಿಸಿ.
  • ಹೊಲದ ಒಳಗೆ ಮತ್ತು ಸುತ್ತಮುತ್ತಲಿನ ಕಳೆಗಳನ್ನು ನಿಯಂತ್ರಿಸಿ.
  • ಒಂದು ಬದಿ ಮಾತ್ರ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಅಥವಾ ಬಾಡುತ್ತಿರುವ ಕೆಳಗಿನ ಎಲೆಗಳ ಮೇಲೆ ನಿರಂತರ ನಿಗಾ ಇರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ