ಹತ್ತಿ

ಹತ್ತಿಯ ಸೆರ್ಕೊಸ್ಪೋರಾ ಎಲೆಚುಕ್ಕಿ ರೋಗ (ಸೆರ್ಕೊಸ್ಪೋರಾ ಲೀಫ್ ಸ್ಪಾಟ್)

Mycosphaerella gossypina

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಆರಂಭದಲ್ಲಿ, ಎಲೆಗಳ ಮೇಲೆ ಕೆಂಪು ಗಾಯಗಳು ಕಾಣಿಸಿಕೊಳ್ಳುತ್ತವೆ.
  • ಇವು ನಂತರ ಹೆಚ್ಚಾಗಿ, ನೇರಳೆ ಅಥವಾ ಕಪ್ಪು ಅಂಚು ಹೊಂದಿರುವ ಬೂದು ಬಣ್ಣ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ.
  • ಕಲೆಗಳು ದೊಡ್ಡದಾಗುತ್ತಿದ್ದಂತೆ, ಅವುಗಳ ಅಂಚುಗಳು ತೆಳು ಮತ್ತು ಗಾಢ ಕೇಂದ್ರೀಕೃತ ವರ್ತುಲಗಳನ್ನು ಪ್ರದರ್ಶಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಈ ರೋಗವು ಪ್ರೌಢ ಸಸ್ಯಗಳಲ್ಲಿ, ಬೆಳೆದ ಎಲೆಗಳ ಮೇಲೆ ಪರಿಣಾಮ ಬೀರುತ್ತದೆ. ಸೋಂಕಿನ ಆರಂಭಿಕ ಹಂತಗಳಲ್ಲಿ ಈ ಎಲೆಗಳ ಮೇಲೆ ಕೆಂಪು ಗಾಯಗಳು ಕಾಣಿಸಿಕೊಳ್ಳುತ್ತವೆ. ರೋಗ ಮುಂದುವರೆದಂತೆ, ಗಾಯಗಳು ದೊಡ್ಡದಾಗುತ್ತವೆ ಮತ್ತು ನೇರಳೆ ಅಥವಾ ಕಪ್ಪು ಅಂಚು ಹೊಂದಿರುವ ಬೂದು ಬಣ್ಣ ಅಥವಾ ಕಂದು ಬಣ್ಣಕ್ಕೆ ತಿರುಗುತ್ತವೆ. ಗಾಯಗಳು ವೃತ್ತಾಕಾರದ ಅಥವಾ ಅನಿಯಮಿತ ಆಕಾರದಲ್ಲಿರುತ್ತವೆ ಮತ್ತು ಸೋಂಕಿನ ಸಮಯವನ್ನು ಅವಲಂಬಿಸಿ ಗಾತ್ರದಲ್ಲಿ ಬದಲಾಗುತ್ತವೆ. ಚುಕ್ಕೆಗಳು ಒಂದೆಡೆ ಸೇರಿ ವಲಯ ಸೃಷ್ಟಿಸುತ್ತವೆ. ಕಪ್ಪು ಮತ್ತು ತಿಳಿ ಕಂದು ಅಥವಾ ಕೆಂಪು ಅಂಚುಗಳು ಒಂದಾದ ಮೇಲೊಂದು ಬರುತ್ತವೆ. ಬಾಧಿತ ಎಲೆಗಳು ಅಂತಿಮವಾಗಿ ಬಣ್ಣ ಕಳೆದುಕೊಂಡು, ಉದುರಿಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಇದುವೆರಗೂ ಯಾವುದೇ ಜೈವಿಕ ನಿಯಂತ್ರಣ ವಿಧಾನಗಳು ತಿಳಿದು ಬಂದಿಲ್ಲ. ರೋಗದ ಸಂಭವನೀಯತೆ ಅಥವಾ ಗಂಭೀರತೆಯನ್ನು ಕಡಿಮೆ ಮಾಡುವ ನಿಮ್ಮ ಪ್ರಯತ್ನ ಯಶಸ್ವಿಯಾಗಿದ್ದರೆ, ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನ ಲಭ್ಯವಿದ್ದರೆ ಮೊದಲು ಅದನ್ನು ಪರಿಗಣಿಸಿ. ಮಂಕೋಜೆಬ್ ಅಥವಾ ತಾಮ್ರ ಆಕ್ಸಿಕ್ಲೋರೈಡ್ ಇರುವ ದ್ರಾವಣವನ್ನು 2 ಕಿ.ಗ್ರಾಂ / ಹೆಕ್ಟೇರಿನಂತೆ ರೋಗದ ಆರಂಭದಲ್ಲಿ ಸಿಂಪಡಿಸಿ. 15 ದಿನಗಳ ಅಂತರದಲ್ಲಿ ಮತ್ತೆ ಎರಡರಿಂದ ಮೂರು ಬಾರಿ ಈ ಸಿಂಪಡಿಕೆ ಮಾಡಬಹುದು. ಕಾರ್ಬೆಂಡಿಝೆಮ್ 3 ಗ್ರಾಂ / ಲೀಟರ್ ಕ್ಯಾಪ್ಟನ್ 2 ಗ್ರಾಂ / ಲೀಟರ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ಮೇಲೆ ಹೇಳಿದ ಪ್ರಮಾಣದಲ್ಲೇ ಸಿಂಪಡಿಸಿ ಉತ್ತಮ ಫಲಿತಾಂಶ ಪಡೆಯಬಹುದು.

ಅದಕ್ಕೆ ಏನು ಕಾರಣ

ಹತ್ತಿಯ ಸಸಿಗಳನ್ನು ಆಕ್ರಮಿಸುವ, ಸರ್ಕೋಸ್ಪೊರಾ ಕುಟುಂಬದ ಮೈಕೋಸ್ಫೇರೆಲ್ಲಾ ಗೊಸ್ಸಿಪಿನಾ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇವು ಸೋಯಾಬೀನ್ ಅಥವಾ ಮೆಣಸು ಮುಂತಾದ ಇತರ ಬೆಳೆಗಳ ಮೇಲೆ ಪರಿಣಾಮ ಬೀರುವ ಜೀವಿಗಳಿಗಿಂತ ವಿಭಿನ್ನವಾಗಿರುತ್ತವೆ. ಜಮೀನಿನಲ್ಲಿ ಇತರ ಎಲೆಯ ರೋಗಗಳಿಂದ- ಉದಾಹರಣೆಗೆ ಟಾರ್ಗೆಟ್ ಸ್ಪಾಟ್ - ಸೆರ್ಕೊಸ್ಪೊರಾ ಎಲೆಚುಕ್ಕಿಯನ್ನು ಪ್ರತ್ಯೇಕಿಸುವುದು ಕಷ್ಟ. ಆದಾಗ್ಯೂ, ಈ ರೋಗವು ನಿರ್ದಿಷ್ಟವಾಗಿ ಬರ / ಪೋಷಕಾಂಶದ ಕೊರತೆ (ಮುಖ್ಯವಾಗಿ ಪೊಟ್ಯಾಸಿಯಮ್) ಮುಂತಾದ ಒತ್ತಡಗಳಿಗೆ ಒಳಗಾಗಿರುವ ಹತ್ತಿ ಗಿಡಗಳಲ್ಲಿ ಕಂಡುಬರುತ್ತದೆ ಎಂಬುದು ಇದರ ವಿಶೇಷತೆಯಾಗಿದೆ. ಸೂಕ್ತ ರಸಗೊಬ್ಬರದ ಮೂಲಕ ಸಸ್ಯದ ಚಟುವಟಿಕೆಯನ್ನು ಕಾಪಾಡಿಕೊಳ್ಳುವುದು ಮತ್ತು ಸರಿಯಾದ ನೀರಾವರಿ ಮೂಲಕ ಬರದ ಒತ್ತಡ ತಡೆಯುವುದರಿಂದ ಪ್ರಾಥಮಿಕ ಸೋಂಕನ್ನು ಗಮನಾರ್ಹವಾಗಿ ವಿಳಂಬ ಮಾಡಬಹುದು. ಇದು ಸೋಂಕಿನ ತೀವ್ರತೆಯನ್ನು ಕೂಡ ಕಡಿಮೆ ಮಾಡುತ್ತದೆ. ಈ ರೋಗವು 20-30 °C ನಡುವಿನ ಉಷ್ಣತೆಯಲ್ಲಿ ಮತ್ತು ಹೆಚ್ಚು ಆರ್ದ್ರ ಹವಾಮಾನದಲ್ಲಿ ಅತಿಯಾಗಿರುತ್ತದೆ. ಗಾಳಿ ಮತ್ತು ನೀರಿನ ಸಿಂಪಡಿಕೆ ಮೂಲಕ ಬೀಜಕಗಳು ಆರೋಗ್ಯಕರ ಎಲೆಗಳ ಮೇಲೂ ಹರಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ, ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ರೋಗಲಕ್ಷಣಗಳಿಗಾಗಿ ಹೊಲವನ್ನು ನಿಯಮಿತವಾಗಿ ಪರಿಶೀಲಿಸಿ.
  • ಸೋಂಕಿತ ಸಸ್ಯ ವಸ್ತುಗಳನ್ನು ತೆಗೆದುಹಾಕಿ ಮತ್ತು ಅದನ್ನು ಜಮೀನಿನಿಂದ ದೂರದಲ್ಲಿ ನಾಶಮಾಡಿ.
  • ಸಸ್ಯದ ಒತ್ತಡವನ್ನು ತಗ್ಗಿಸಲು ಸಮತೋಲಿತ ರಸಗೊಬ್ಬರಗಳನ್ನು (ವಿಶೇಷವಾಗಿ ಪೊಟ್ಯಾಸಿಯಮ್ ಅನ್ನು ) ಹಾಕಿ ಮತ್ತು ಸರಿಯಾದ ನೀರಾವರಿ ವ್ಯವಸ್ಥೆ ಮಾಡಿ.
  • ಕೊಯ್ಲಿನ ನಂತರ ಉಳಿದ ಸಸ್ಯದ ಭಾಗಗಳನ್ನು ಜಮೀನಿನಿಂದ ದೂರದಲ್ಲಿ ಹೂಳುವ ಅಥವಾ ಸುಡುವ ಮೂಲಕ ನಾಶ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ