ಸ್ಟ್ರಾಬೆರಿ

ಸ್ಟ್ರಾಬೆರಿಯ ಆಂಥ್ರಾಕ್ನೋಸ್

Colletotrichum spp.

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮಾಗುತ್ತಿರುವ ಹಣ್ಣಿನ ಮೇಲೆ ತಿಳಿ ಕಂದು, ನೀರಿನಲ್ಲಿ ನೆನೆದಂತಹ ಕಲೆಗಳು.
  • ಕಳಿತ ಹಣ್ಣಿನ ಮೇಲೆ ಗಾಢ ಕಂದು ಅಥವಾ ಕಪ್ಪು ಬಣ್ಣದ ದುಂಡಗಿನ ಗುಳಿಬಿದ್ದಂತಹ ಗಾಯಗಳು.
  • ಸಸ್ಯ ಅಂಗಾಂಶಗಳ ಬಣ್ಣ ಕಳೆದುಕೊಳ್ಳುವಿಕೆ, ಮುಖ್ಯವಾಗಿ ಬೇರುಗಳ ಮೇಲೆ.
  • ಎಲೆಗಳ ಮೇಲೆ ಕಪ್ಪು ಕಲೆಗಳು ಮತ್ತು ಗಾಯ.
  • ಎಲ್ಲಾ ಹಸಿರು ಭಾಗಗಳ ಮೇಲೆ ಗಾಢ ಕಂದು ಅಥವಾ ಕಪ್ಪು ಬಣ್ಣದ ಗುಳಿಬಿದ್ದಂತಹ, ವೃತ್ತಾಕಾರದ ಕಲೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಸ್ಟ್ರಾಬೆರಿ

ಸ್ಟ್ರಾಬೆರಿ

ರೋಗಲಕ್ಷಣಗಳು

ಕೊಳೆತವನ್ನು ಉಂಟುಮಾಡುವ ಈ ರೋಗ ಸಸ್ಯದ ಎಲ್ಲಾ ಭಾಗಗಳ ಮೇಲೂ ಪರಿಣಾಮ ಬೀರಬಹುದು. ಅತ್ಯಂತ ಸ್ಪಷ್ಟವಾದ ರೋಗಲಕ್ಷಣಗಳೆಂದರೆ ಕೊಳೆಯುತ್ತಿರುವ ಹಣ್ಣುಗಳು ಮತ್ತು ಬೇರುಗಳ ಬಳಿ ಮತ್ತು ಮೇಲೆ ಬಣ್ಣಗೆಟ್ಟ ಅಂಗಾಂಶಗಳು. ಇದನ್ನು 'ಕ್ರೌನ್ ಕೊಳೆತ' ಎಂದೂ ಕರೆಯುತ್ತಾರೆ. ಸಸ್ಯದ ಕ್ರೌನ್ ಸೋಂಕಿಗೆ ಒಳಗಾದಾಗ, ಇಡೀ ಸಸ್ಯವು ಬಾಡಬಹುದು. ಸೋಂಕಿತ ಸಸ್ಯದ ಕ್ರೌನ್ ಅನ್ನು ತೆರೆಯುವ ಮೂಲಕ ನೀವು ಬಣ್ಣಗೆಟ್ಟಿರುವುದನ್ನು ನೋಡಬಹುದು. ಹಣ್ಣಿನ ಕೊಳೆತವು ಮಾಗಿದ ಹಣ್ಣಿನ ಮೇಲೆ ತಿಳಿ ಕಂದು ಬಣ್ಣದ, ನೀರಿನಲ್ಲಿ ನೆನೆದಂತಹ ಕಲೆಗಳಾಗಿ ಪ್ರಾರಂಭವಾಗುತ್ತದೆ. ಇದು ಗಾಢ ಕಂದು ಅಥವಾ ಕಪ್ಪು ಬಣ್ಣದ ಗಟ್ಟಿಯಾದ ಗಾಯಗಳಾಗಿ ಬದಲಾಗುತ್ತದೆ. ಆರ್ದ್ರ ಪರಿಸ್ಥಿತಿಗಳಲ್ಲಿ, ಕಿತ್ತಳೆ ಬಣ್ಣದ ದ್ರವವು ಹಣ್ಣಿನ ಗಾಯಗಳಿಂದ ಹೊರಬರಬಹುದು. ಮೊಗ್ಗುಗಳು ಮತ್ತು ಹೂವುಗಳ ಮೇಲೆ ಕಪ್ಪು ಗಾಯಗಳು ಮತ್ತು ಒಣಗಿದ ಹೂವುಗಳು ಸೋಂಕಿನ ಆರಂಭಿಕ ಚಿಹ್ನೆಗಳಾಗಿವೆ. ಎಲೆಗಳು ಕಪ್ಪು ಕಲೆಗಳು ಮತ್ತು ಹಾನಿಗಳನ್ನು ಹೊಂದಿರಬಹುದು. ಆದರೆ ಇದು ಮಾತ್ರವೇ ಸಸ್ಯವು ಆಂಥ್ರಾಕ್ನೋಸ್ ಸೋಂಕು ಹೊಂದಿದೆ ಎಂಬುದನ್ನು ಹೇಳುವುದಿಲ್ಲ.

Recommendations

ಜೈವಿಕ ನಿಯಂತ್ರಣ

ರೋಗವನ್ನು ನಿಯಂತ್ರಿಸುತ್ತದೆ ಎಂದು ಸ್ಪಷ್ಟವಾಗಿ ಹೇಳುವ ಉತ್ಪನ್ನಗಳಿಗಾಗಿ ಹುಡುಕಿ. ಇವುಗಳನ್ನು ಉಪಯೋಗಿ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳಿಂದ ತಯಾರಿಸಲಾಗುತ್ತದೆ. ರೋಗವು ಪ್ರಾರಂಭವಾಗುವ ಮೊದಲು ಬಳಸಿದಾಗ ಈ ಉತ್ಪನ್ನಗಳು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸಾವಯವ ಪದಾರ್ಥಗಳನ್ನು ನಿರ್ವಹಿಸುವ ಮತ್ತು/ಅಥವಾ ಸೇರಿಸುವ ಮೂಲಕ ಮತ್ತು ಹಿಂದಿನ ವರ್ಷದ ಸಸ್ಯಗಳ ಅವಶೇಷಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಮಣ್ಣನ್ನು ಆರೋಗ್ಯಕರವಾಗಿ ಇರಿಸಿ. ಆರೋಗ್ಯಕರ ಮಣ್ಣು, ಮಣ್ಣಿನಿಂದ ಹರಡುವ ರೋಗಕಾರಕಗಳನ್ನು ತಡೆಯುವ ಅನೇಕ ಉಪಯೋಗಿ ಜೀವಿಗಳನ್ನು ಹೊಂದಿರಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸಸ್ಯಗಳು ಹೂಬಿಡುವ ಹಂತದಲ್ಲಿದ್ದಾಗ ಸಿಂಪಡಿಸುವುದು ಬಹಳ ಮುಖ್ಯ. ಚಿಕಿತ್ಸೆಯನ್ನು ಶುರುಮಾಡಲು ನೀವು ಹಣ್ಣಿನ ಮೇಲೆ ರೋಗಲಕ್ಷಣಗಳನ್ನು ನೋಡುವವರೆಗೆ ಕಾಯಬೇಡಿ. ಸರ್ಕಾರದಿಂದ ಅನುಮೋದಿಸಲ್ಪಟ್ಟ ಶಿಲೀಂಧ್ರನಾಶಕಗಳನ್ನು ಮಾತ್ರ ಬಳಸಿ. ಆಂಥ್ರಾಕ್ನೋಸ್ ಅತ್ಯಂತ ಪರಿಣಾಮಕಾರಿ ಶಿಲೀಂಧ್ರನಾಶಕಗಳಿಗೆ ನಿರೋಧಕತೆಯನ್ನು ಬೆಳೆಸಿಕೊಳ್ಳುವುದನ್ನು ತಡೆಯಲು ನೀವು ಬಳಸುವ ಶಿಲೀಂಧ್ರನಾಶಕದ ಪ್ರಕಾರವನ್ನು ಬದಲಾಯಿಸಿ. ನೀವು ಆಯ್ಕೆ ಮಾಡಿದ ಶಿಲೀಂಧ್ರನಾಶಕಗಳ ಲೇಬಲ್ ಅನ್ನು ಓದಿ ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಿ ಮತ್ತು ಅವುಗಳನ್ನು ಬಳಸುವ ಸೂಚನೆಗಳು ಮತ್ತು ನಿಯಮಗಳನ್ನು ಅನುಸರಿಸಿ. ಕೆಲವು ಶಿಲೀಂಧ್ರನಾಶಕ ಲೇಬಲ್‌ಗಳು ಅವುಗಳನ್ನು ನಾಟಿ ಹಂತದಲ್ಲಿ ಡಿಪ್ ಅಪ್ಲಿಕೇಶನ್‌ಗಳಿಗೆ ಬಳಸಬಹುದು ಎಂದು ಹೇಳಬಹುದು. ಇದು ನಿಮ್ಮ ಬೆಳೆಗೆ ಇನ್ನೂ ಹೆಚ್ಚಿನ ರಕ್ಷಣೆಯನ್ನು ನೀಡುತ್ತದೆ.

ಅದಕ್ಕೆ ಏನು ಕಾರಣ

ಆಂಥ್ರಾಕ್ನೋಸ್ ಒಂದು ಶಿಲೀಂಧ್ರ ರೋಗ ಮತ್ತು ಸ್ಟ್ರಾಬೆರಿಗಳಿಗೆ ಅತ್ಯಂತ ಹಾನಿಕಾರಕ ಕಾಯಿಲೆಯಾಗಿದೆ. ಇದು ಬೆಳವಣಿಗೆಯ ಋತುವಿನ ಉದ್ದಕ್ಕೂ ಮತ್ತು ಕೊಯ್ಲು ಮಾಡಿದ ನಂತರ ದೊಡ್ಡ ನಷ್ಟವನ್ನು ಉಂಟುಮಾಡಬಹುದು. ರೋಗವು ಸಾಮಾನ್ಯವಾಗಿ ಹೊಸ ಸ್ಟ್ರಾಬೆರಿ ನಾಟಿ ಸಸಿ ಮೂಲಕ ಹೊಲಗಳನ್ನು ಪ್ರವೇಶಿಸುತ್ತದೆ. ರೋಗಕಾರಕವು ಇದ್ದರೂ, ತಾಪಮಾನ ಮತ್ತು ತೇವಾಂಶ ಅವುಗಳಿಗೆ ಬೆಳೆಯಲು ಅನುಕೂಲಕರವಾಗುವವರೆಗ ಯಾವುದೇ ಲಕ್ಷಣಗಳನ್ನು ತೋರಿಸದೇ ಇರಬಹುದು. ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ರೋಗವು ಚೆನ್ನಾಗಿ ಬೆಳೆಯುತ್ತದೆ. ಮಳೆಯ ಹನಿಗಳು ನೆಲಕ್ಕೆ ಅಪ್ಪಳಿಸಿದಾಗ, ಅವು ಮಣ್ಣಿನ ಕಣಗಳನ್ನು ಗಾಳಿಗೆ ತಳ್ಳಬಹುದು ಮತ್ತು ಅವು ರೋಗವನ್ನು ಹರಡಬಹುದು. ವಿಶೇಷವಾಗಿ ಗಾಳಿ ಜೋರಾಗಿದ್ದಾಗ ಇದು ನಡೆಯುತ್ತದೆ. ರೋಗಕಾರಕವು ಒಂಬತ್ತು ತಿಂಗಳವರೆಗೆ ಮಣ್ಣಿನಲ್ಲಿ ಮತ್ತು ಸಸ್ಯದ ಅವಶೇಷಗಳಲ್ಲಿ ಬದುಕಬಲ್ಲದು ಮತ್ತು ಹೊಲದ ಬಳಿ ಬೆಳೆಯುವ ಕಳೆಗಳಿಗೆ ಸೋಂಕು ತರುತ್ತದೆ ಎಂದು ವರದಿಯಾಗಿದೆ. ಯಂತ್ರಗಳು ಮತ್ತು ಜನರು ಹೊಲದಲ್ಲಿ ಸಂಚರಿಸುವುದರಿಂದ ಕೂಡ ರೋಗ ಹರಡಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ನಾಟಿಸಸಿಗಳನ್ನು ಬಳಸಿ ಮತ್ತು ಉತ್ತಮ ಕೃಷಿ ಅಭ್ಯಾಸಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.
  • ಏಕೆಂದರೆ ನಿಮ್ಮ ಸಸಿ ನಿಜವಾಗಿಯೂ ರೋಗ-ಮುಕ್ತವಾಗಿದೆಯೇ ಎಂದು ತಿಳಿಯುವುದು ಕೆಲವೊಮ್ಮೆ ಕಷ್ಟವಾಗುತ್ತದೆ.
  • ನರ್ಸರಿಯಲ್ಲಿ ಮತ್ತು ಹೊಲದಲ್ಲಿ ಬೆಳೆಯ ಸುತ್ತಲೂ ಗಾಳಿಯಾಡುವಂತೆ ಮತ್ತು ಹಣ್ಣುಗಳು ಬೇಗನೆ ಒಣಗುವಂತೆ ಖಚಿತಪಡಿಸುವ ರೀತಿಯಲ್ಲಿ ಕೃಷಿ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.
  • ನೀರಿನ ಹನಿಗಳ ಮೂಲಕ ರೋಗ ಹರಡುವುದನ್ನು ತಡೆಯಲು ತೆರೆದ ಮಣ್ಣನ್ನು ಒಣಹುಲ್ಲಿನ ಮಲ್ಚ್‌ನಿಂದ ಮುಚ್ಚಿ.
  • ರೋಗ ಹರಡಲು ಅನುಕೂಲವಾಗುವ ಪ್ಲಾಸ್ಟಿಕ್ ಮಲ್ಚ್‌ಗಳನ್ನು ಬಳಸದಿರಿ.
  • ತುಂತುರು ನೀರಾವರಿ ಬದಲಿಗೆ ಕೆಳಭಾಗಕ್ಕೆ ನೀರುಹಾಕುವುದು ಅಥವಾ ಹನಿ ನೀರಾವರಿ ಬಳಸಿ.
  • ಸಸ್ಯಗಳಲ್ಲಿ ಹೂವು ಅರಳುತ್ತಿರುವಾಗ ಮತ್ತು ಹವಾಮಾನ ಪರಿಸ್ಥಿತಿಗಳು ರೋಗಕ್ಕೆ ಅನುಕೂಲಕರವಾಗಿದ್ದರೆ ಆಂಥ್ರಾಕ್ನೋಸ್ ವಿರುದ್ಧ ಕೆಲಸ ಮಾಡುವ ಸಾಂಪ್ರದಾಯಿಕ ಅಥವಾ ಸಾವಯವ ಶಿಲೀಂಧ್ರನಾಶಕಗಳನ್ನು ಹಾಕಿ.
  • ನಿಮಗೆ ಯಾವುದೇ ರೋಗಲಕ್ಷಣಗಳು ಕಾಣದಿದ್ದರೂ ಸಹ, ಈ ಶಿಲೀಂಧ್ರನಾಶಕಗಳನ್ನು ರೋಗವು ಬೆಳೆಯದಂತೆ ತೆಡಯಲು ಬಳಸಲಾಗುತ್ತದೆ.
  • ಹಳೆಯ ಸಸ್ಯದ ಅವಶೇಷಗಳಿಂದ ಮುಕ್ತವಾಗಿರುವ ಮಣ್ಣಿನಲ್ಲಿ ನೆಡಬೇಕು ಮತ್ತು ಹೊಸ ಸಾವಯವ ಪದಾರ್ಥಗಳನ್ನು ಸೇರಿಸುವ ಮೂಲಕ ಮಣ್ಣು ಆರೋಗ್ಯಕರವಾಗಿರುವಂತೆ ಎಂದು ಖಚಿತಪಡಿಸಿಕೊಳ್ಳಿ.
  • ಮಣ್ಣು ಸಂಪೂರ್ಣವಾಗಿ ರೋಗದಿಂದ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನೀವು ಮಣ್ಣಿನ ಧೂಮೀಕರಣ(ಫ್ಯೂಮಿಗೇಶನ್) ಅಥವಾ ಸೂರ್ಯನ ಬೆಳಕಲ್ಲಿ ಮಣ್ಣನ್ನು ಬಿಸಿ ಮಾಡುವಂತಹ ವಿಧಾನಗಳನ್ನು ಬಳಸಬಹುದು (ಸೌರೀಕರಣ).
  • ನಿಯಮಿತವಾಗಿ ಹೊಲಗಳಿಂದ ಕಳೆಗಳನ್ನು ತೆಗೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ