ಸಿರಿಧಾನ್ಯ

ಪೈರಿಕ್ಯೂಲಾರಿಯಾ ಎಲೆ ಚುಕ್ಕೆ ರೋಗ

Magnaporthe oryzae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ನೀರಿನಲ್ಲಿ ನೆನೆಸಿದಂತಹ, ಬೂದುಬಣ್ಣದ ಗಾಯಗಳು ಕಾಣಿಸಿಕೊಳ್ಳುತ್ತವೆ.
  • ಇವು ಕಾಲಾನಂತರದಲ್ಲಿ ದೊಡ್ಡದಾಗುತ್ತವೆ ಮತ್ತು ಕೊಳೆತಂತಾಗುತ್ತವೆ.
  • ಕ್ಲೋರೋಸಿಸ್ ಮತ್ತು ಎಲೆಗಳ ಅಕಾಲಿಕ ಉದುರುವಿಕೆ ಉಂಟಾಗುತ್ತದೆ.
  • ಕಾಂಡಗಳ ಮೇಲೂ ಸಹ ಪರಿಣಾಮ ಬೀರಬಹುದು.
  • ಮತ್ತು ರೋಗ ಮುಂದುವರೆದಂತೆ ಅವು ಕುಸಿಯಬಹುದು.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ರೋಗಲಕ್ಷಣ ಮೊದಲಿಗೆ ನೀರಿನಲ್ಲಿ ನೆನೆಸಿದ ಗಾಯಗಳಂತೆ ಕಾಣಿಸಿಕೊಳ್ಳುತ್ತದೆ ಮತ್ತು ನಂತರ ದೊಡ್ಡದಾಗಿ ಮಧ್ಯದಲ್ಲಿ ಬೂದು ಬಣ್ಣದಲ್ಲಿರುವ ನೆಕ್ರೋಟಿಕ್ (ಕಂದು ಬಣ್ಣದ) ಗಾಯದಂತಾಗುತ್ತದೆ. ಗಾಯಗಳು ಅಂಡಾಕಾರ ಅಥವಾ ವಜ್ರಾಕಾರದಲ್ಲಿರುತ್ತವೆ, ಮತ್ತು ಸುಮಾರು 2.5 ಮಿಮೀ ವ್ಯಾಸವನ್ನು ಹೊಂದಿರುತ್ತವೆ. ಅವುಗಳು ಸಾಮಾನ್ಯವಾಗಿ ಹಳದಿ ಕ್ಲೋರೋಟಿಕ್ ವರ್ತುಲದಿಂದ ಸುತ್ತುವರೆದಿರುತ್ತವೆ. ಇವು ಬೆಳೆದಂತೆ ನೆಕ್ರೋಟಿಕ್ ಆಗುತ್ತವೆ ಮತ್ತು ಇವು ಕೇಂದ್ರೀಕೃತ ಉಂಗುರಗಳ ಆಕಾರವನ್ನು ಪಡೆಯುತ್ತವೆ. ಕಾಂಡಗಳು ಕೂಡ ಸಾಮಾನ್ಯವಾಗಿ ಎಲೆ ಕವಚಗಳ ಬಳಿ ಸೋಂಕಿಗೆ ಒಳಗಾಗಬಹುದು ಮತ್ತು ತೀವ್ರ ಸೋಂಕಿನ ಸಂದರ್ಭದಲ್ಲಿ ಇವು ಕುಸಿಯುತ್ತವೆ. ತೆನೆಗಳ ತೊಟ್ಟಿನ ಭಾಗ ಸೋಂಕಿಗೆ ಒಳಗಾಗುತ್ತದೆ ಮತ್ತು ಅಸ್ಥಿರವಾಗುತ್ತವೆ, ಮತ್ತು ಅವುಗಳು ಬೆಳೆದರೂ ಕೂಡ ಧಾನ್ಯಗಳು ಸುಕ್ಕಾಗಿರುತ್ತವೆ. ತೀವ್ರವಾದ ಸೋಂಕಿನ ಸಂದರ್ಭಗಳಲ್ಲಿ, ವ್ಯಾಪಕವಾದ ಕ್ಲೋರೊಸಿಸ್ ಉಂಟಾಗಿ ಎಳೆಯ ಎಲೆಗಳು ಅಕಾಲಿಕವಾಗಿ ಒಣಗಲು ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ನರ್ಸರಿಯಲ್ಲಿ 8-10 ದಿನಗಳ ಅಂತರದಲ್ಲಿ ಬೋರ್ಡೆಕ್ಸ್ ಮಿಶ್ರಣವನ್ನು ಹಾಕಬೇಕು ಮತ್ತು ಜಮೀನಿನಲ್ಲಿ 14 ದಿನಗಳ ಅಂತರದಲ್ಲಿ ಹಾಕಬೇಕು. ಗರಿಷ್ಟ ಹಾನಿ ತೆನೆಯ ಸೋಂಕಿನಿಂದ ಆಗುವುದರಿಂದ, ತೆನೆ ಹೊರಹೊಮ್ಮುವ ಮೊದಲೇ ಬೆಳೆಗಳಿಗೆ ಇದನ್ನು ಸಿಂಪಡಿಸುವುದರಿಂದ ಸೋಂಕು ತಗ್ಗಿಸಬಹುದು. ಬೆಳ್ಳುಳ್ಳಿ ರಸ, ಬೇವಿನ ಎಣ್ಣೆ ಅಥವಾ ಹಿನೋಸನ್ (ಆರ್ಗನ್ಫೊಫಾಸ್ಫೇಟ್) ಹೊಂದಿರುವ ಸಿಂಪಡಿಕೆಗಳು ಕೂಡ ಶಿಲೀಂಧ್ರವನ್ನು ಪರಿಣಾಮಕಾರಿಯಾಗಿ ನಿಗ್ರಹಿಸುತ್ತವೆ. ಆರ್ಗನೋ ಮರ್ಕ್ಯುರಿಯಲ್ಸ್ ಸಂಯುಕ್ತಗಳಿಂದ ಬೀಜಗಳಿಗೆ ಚಿಕಿತ್ಸೆ ಮಾಡುವ ಮೂಲಕ ರೋಗದ ಸಂಭಾವ್ಯತೆಯನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಯಾವಾಗಲೂ ಪರಿಗಣಿಸಿ. ಹೆಕ್ಸಿಕಾನಜೋಲ್ ನೊಂದಿಗೆ ಟ್ರೈಸಿಕ್ಲಾಝೊಲ್ ಹೊಂದಿರುವ ಶಿಲೀಂಧ್ರನಾಶಕಗಳು ಶಿಲೀಂಧ್ರವನ್ನು ನಿರ್ಮೂಲನೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ. ಪ್ರೋಕ್ಲೋರಾಜ್ ನೊಂದಿಗಿನ ಚಿಕಿತ್ಸೆ ಕೂಡ ಶಿಲೀಂಧ್ರಗಳ ಕಡಿತಕ್ಕೆ ಕಾರಣವಾಗುತ್ತದೆ. ಪರಿಣಾಮಕಾರಿ ಹತೋಟಿ ಮತ್ತು ಹೆಚ್ಚುವರಿ ಧಾನ್ಯ ಇಳುವರಿಯನ್ನು ಪಡೆಯಲು ಈ ಸಂಯುಕ್ತವನ್ನು ಮೂರು ಬಾರಿ ವಾರಗಳ ಅಂತರದಲ್ಲಿ ಬೂಟ್ ಹಂತದಿಂದಲೇ ಸಿಂಪಡಿಸಬೇಕು.

ಅದಕ್ಕೆ ಏನು ಕಾರಣ

ಶಿಲೀಂಧ್ರ ಮ್ಯಾಗ್ನಾಪೋರ್ಥೆ ಒರಿಝೆ ಯಿಂದಾಗಿ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಸಸ್ಯದ ಉಳಿಕೆಗಳಲ್ಲಿ ಅಥವಾ ಸೋಂಕಿತ ತೆನೆಗಳ ಸುಕ್ಕಾದ ಧಾನ್ಯಗಳಲ್ಲಿ ಇರುತ್ತವೆ. ಇವು ಮುಖ್ಯವಾಗಿ ಗಾಳಿಯಿಂದ ಹರಡುವ ಬೀಜಕಗಳ ಮೂಲಕ ಹರಡುತ್ತವೆ. ಆರಂಭದಲ್ಲಿ ಕಳೆಗಳು ಅಥವಾ ಇತರ ಧಾನ್ಯ ಸಸ್ಯಗಳು ಪರ್ಯಾಯ ಆಶ್ರಯದಾತ ಸಸ್ಯಗಳಾಗಿ ಕಾರ್ಯನಿರ್ವಹಿಸುತ್ತವೆ. ಸೋಂಕಿತ ಬೀಜಗಳು ನರ್ಸರಿಯಲ್ಲಿ ಸೋಂಕನ್ನು ಉಂಟುಮಾಡಬಹುದು, ಮತ್ತು ನಂತರ ಮುಖ್ಯ ಜಮೀನಿನಲ್ಲಿ ಹರಡುತ್ತವೆ. ಆರ್ದ್ರ ಪರಿಸ್ಥಿತಿಗಳು ಮತ್ತು ಬೆಚ್ಚಗಿನ ತಾಪಮಾನ ರೋಗಕ್ಕೆ ಹೆಚ್ಚು ಅನುಕೂಲಕರವಾಗಿದ್ದು, ಬೀಜಕಗಳನ್ನು ಹೊಂದಿರುವ ಆಲಿವ್-ಬೂದು ಬಣ್ಣದ ಹೊರರಚನೆಗಳು ಬೆಳೆಯುತ್ತವೆ. ಕುಡಿಯೊಡೆಯುವುದು, ಬೀಜಕಗಳ ಉತ್ಪಾದನೆ ಮತ್ತು ಆಶ್ರಯದಾತ ಕೋಶಗಳ ಮೇಲಿನ ಆಕ್ರಮಣ 25 °C ನಲ್ಲಿ ಅತೀ ಹೆಚ್ಚಾಗಿರುತ್ತದೆ. ರೋಗಯುಕ್ತ ತೆನೆಗಳ ಧಾನ್ಯಗಳು ಶಿಲೀಂಧ್ರವನ್ನು ಹೊಂದಿರುವ ಕಾರಣ, ಆ ಬೀಜಗಳನ್ನು ಮುಂದಿನ ಋತುವಿಗೆ ಬಳಸಬಾರದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದಲೇ ಬೀಜಗಳನ್ನು ಬಳಸಲು ಮರೆಯದಿರಿ.
  • ರೋಗದ ಲಕ್ಷಣಗಳಿಗಾಗಿ ನಿಯಮಿತವಾಗಿ ನರ್ಸರಿ ಮತ್ತು ಜಮೀನನನ್ನು ಪರಿಶೀಲಿಸಿ.
  • ಸೋಂಕಿತ ಸಸ್ಯಗಳನ್ನು ತಕ್ಷಣವೇ ತೆಗೆದುಹಾಕಿ.
  • ಸುಗ್ಗಿಯ ನಂತರ ಜಮೀನನ್ನು ಊಳಿ ಮತ್ತು ಸಸ್ಯದ ಉಳಿಕೆಗಳನ್ನು ನಾಶಮಾಡಿ.
  • ಜಮೀನಿನಲ್ಲಿ ಮತ್ತು ಸುತ್ತಮುತ್ತ ಕಳೆಗಳನ್ನು ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ನಿಯಂತ್ರಿಸಿ.
  • ಸೋಂಕಿತ ಜಾಗದಿಂದ ಹೊಸ ಸ್ಥಳಗಳಿಗೆ ಬೀಜಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ