ಬಾಳೆಹಣ್ಣು

ಸಿಗಾರ್ ಎಂಡ್ ರಾಟ್

Trachysphaera fructigena

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ತುದಿಯಲ್ಲಿ ಕೊಳೆತು ಒಣಕಲಾದ ಬೂದು ಅಥವಾ ಕಪ್ಪು ಬಣ್ಣದ ಕಲೆ.
  • ಶಿಲೀಂಧ್ರಗಳ ಬೆಳವಣಿಗೆ ಸಂಪೂರ್ಣ ಹಣ್ಣನ್ನೇ ಆವರಿಸುತ್ತದೆ.
  • ಅಸಹಜ ಆಕಾರ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಈ ರೋಗದ ವಿಶೇಷ ಲಕ್ಷಣವೆಂದರೆ ಒಣಕಲಾದ ಬೂದು ಬಣ್ಣದಲ್ಲಿರುವ ಕೊಳೆತ ಭಾಗ ಹಣ್ಣುಗಳ ತುದಿಯಲ್ಲಿ ಕಾಣಿಸಿಕೊಳ್ಳುವುದು. ವಾಸ್ತವವಾಗಿ ಶಿಲೀಂಧ್ರ ಬೆಳವಣಿಗೆ ಹೂ ಬಿಡುವ ಹಂತದಲ್ಲಿ ಪ್ರಾರಂಭವಾಗುತ್ತದೆ ಹಾಗೂ ಹಣ್ಣು ಮಾಗುವ ಪ್ರಕ್ರಿಯೆಗೆ ಹಾನಿ ಮಾಡುತ್ತದೆ. ಸೋಂಕಿತ ಭಾಗಗಳನ್ನು ಬೂದುಬಣ್ಣದ ಶಿಲೀಂಧ್ರ ಮುಚ್ಚುತ್ತದೆ, ಅದು ಚುಟ್ಟಾದ ಸುಟ್ಟ ತುದಿಯಲ್ಲಿರುವ ಬೂದಿಯಂತೆ ಕಾಣುತ್ತದೆ. ಇದರಿಂದಾಗಿ ರೋಗಕ್ಕೆ ಈ ಹೆಸರು. ಶೇಖರಣೆಯಲ್ಲಿ ಅಥವಾ ಸಾಗಾಟದ ಸಮಯದಲ್ಲಿ ರೋಗವು ಪೂರ್ತಿ ಹಣ್ಣನ್ನು ಆವರಿಸುವಷ್ಟು ಹೆಚ್ಚಬಹುದು. ಇದರಿಂದ ಪೂರ್ತಿ ಹಣ್ಣನ್ನು ಬೂಷ್ಟಿನ ಹೊದಿಕೆ ಆವರಿಸಿಕೊಳ್ಳುತ್ತದೆ. ಹಣ್ಣುಗಳು ಅಸಹಜ ಆಕಾರವನ್ನು ಹೊಂದಿರುತ್ತವೆ, ಮೇಲ್ಮೈಯಲ್ಲಿ ಬೂಷ್ಟು ಗೋಚರವಾಗುತ್ತದೆ ಮತ್ತು ಚರ್ಮದಲ್ಲಿ ಗಾಯ ಗೋಚರವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಬೇಕಿಂಗ್ ಸೋಡಾವನ್ನು ಆಧರಿಸಿದ ಸ್ಪ್ರೇಗಳನ್ನು ಶಿಲೀಂಧ್ರವನ್ನು ನಿಯಂತ್ರಿಸಲು ಬಳಸಬಹುದು. ಈ ಸ್ಪ್ರೇ ಮಾಡಲು, 2 ಲೀಟರ್ ನೀರಿನಲ್ಲಿ 50 ಗ್ರಾಂ ಸೋಪ್, 100 ಗ್ರಾಂ ಬೇಕಿಂಗ್ ಸೋಡಾ ಕರಗಿಸಿ. ಸೋಂಕನ್ನು ತಡೆಗಟ್ಟಲು ಸೋಂಕಿತ ರೆಂಬೆಗಳಿಗೆ ಮತ್ತು ಹತ್ತಿರದ ರೆಂಬೆಗಳಿಗೆ ಈ ಮಿಶ್ರಣವನ್ನು ಸಿಂಪಡಿಸಿ. ಇದು ಹಣ್ಣಿನ ಮೇಲ್ಮೈನ pH ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಶಿಲೀಂಧ್ರದ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ. ತಾಮ್ರದ ಶಿಲೀಂಧ್ರನಾಶಕವನ್ನು ಸಿಂಪಡಿಸುವುದು ಸಹ ಪರಿಣಾಮಕಾರಿಯಾಗಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಸಾಮಾನ್ಯವಾಗಿ ಈ ರೋಗವು ಅಲ್ಪ ಪ್ರಾಮುಖ್ಯತೆಯನ್ನು ಹೊಂದಿದೆ. ಹಾಗಾಗಿ ರಾಸಾಯನಿಕ ನಿಯಂತ್ರಣದ ಅಗತ್ಯ ಬರುವುದು ಅಪರೂಪ. ಬಾಧಿತ ಗೊಂಚಲಿಗೆ ಮನ್ಕೊಜೆಬ್, ಟ್ರಯೋಪಾನೆಟ್ ಮಿಥೈಲ್ ಅಥವಾ ಮೆಟಾಲಾಕ್ಸಿಲ್ ಸಿಂಪಡಿಸಬಹುದು. ಬಳಿಕ ಪ್ಲ್ಯಾಸ್ಟಿಕ್ ಹೊದಿಕೆಯಿಂದ ಮುಚ್ಚಬೇಕು.

ಅದಕ್ಕೆ ಏನು ಕಾರಣ

ಸಿಗಾರ್ ಎಂಡ್ ರಾಟ್ ಬಾಳೆಹಣ್ಣಿನ ರೋಗವಾಗಿದ್ದು ಮುಖ್ಯವಾಗಿ ಶಿಲೀಂಧ್ರ ಟ್ರ್ಯಾಚಿಸ್ಫೇರಾ ಫ್ರುಕ್ಟಿಜೆನಾ ಮತ್ತು ಕೆಲವೊಮ್ಮೆ ಮತ್ತೊಂದು ಶಿಲೀಂಧ್ರ (ವೆರ್ಟಿಸಿಲಿಯಂ ಥಿಯೋಬ್ರೋಮೇ) ದಿಂದ ಉಂಟಾಗುತ್ತದೆ. ಇದು ಆರೋಗ್ಯಕರ ಅಂಗಾಂಶಗಳಿಗೆ ಗಾಳಿ ಅಥವಾ ಮಳೆ ರಾಚಿದಾಗ ತಗುಲುತ್ತದೆ. ಮಳೆಗಾಲದಲ್ಲಿ ಹೂಬಿಡುವ ಹಂತದಲ್ಲಿ ಶಿಲೀಂಧ್ರವು ಬಾಳೆಯನ್ನು ಆಕ್ರಮಿಸುತ್ತದೆ. ಇದು ಹೂವಿನ ಮೂಲಕ ಹಣ್ಣಿಗೆ ಸೋಂಕು ತರುತ್ತದೆ. ಅಲ್ಲಿಂದ, ಅದು ನಂತರ ಹಣ್ಣಿನ ತುದಿಗೆ ಹರಡುತ್ತದೆ ಮತ್ತು ಚುಟ್ಟಾದ ತುದಿಯಲ್ಲಿರುವ ಬೂದಿಗೆ ಹೋಲುವ ಕೊಳೆತವನ್ನು ಉಂಟುಮಾಡುತ್ತದೆ. ಬೆಚ್ಚಗಿನ ತೇವಾಂಶದ ಪರಿಸ್ಥಿತಿಗಳಲ್ಲಿ, ವಿಶೇಷವಾಗಿ ಎತ್ತರದ ಪ್ರದೇಶಗಳಲ್ಲಿನ ಮತ್ತು ನೆರಳಿನ ಪ್ರದೇಶಗಳಲ್ಲಿನ ತೋಟಗಳಲ್ಲಿ ಹಣ್ಣು ಮೂಡಿದ ನಂತರದ ದಿನಗಳಲ್ಲಿ ಸೋಂಕು ಸಾಮಾನ್ಯವಾಗಿ ಕಂಡುಬರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಗಿಡಗಳಿಗೂ ಮೇಲ್ಛಾವಣಿಗೂ ನಡುವೆ ಅಂತರವಿರಲಿ, ಗಾಳಿ ಚೆನ್ನಾಗಿ ಆಡುವಂತಿರಲಿ.
  • ತೋಟದ ಕೆಲಸದ ಸಮಯದಲ್ಲಿ ಸಸ್ಯ ಅಂಗಾಂಶಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ.
  • ನಿರ್ವಹಣೆ ಮತ್ತು ಶೇಖರಣೆಯ ಸಮಯದಲ್ಲಿ ರೋಗವೆರಗುವ ಸಂಭವವನ್ನು ಕಡಿಮೆಮಾಡಲು ಪೂರ್ತಿಯಾಗಿ ಶುದ್ಧೀಕರಿಸಿದ ಉಪಕರಣಗಳನ್ನು ಬಳಸಿ ಮತ್ತು ಶೇಖರಣಾ ವ್ಯವಸ್ಥೆಯಲ್ಲಿ ಶುಚಿತ್ವವನ್ನು ಕಾಪಾಡಿ.
  • ಹಣ್ಣುಗಳನ್ನು ಮಳೆಯಿಂದ ರಕ್ಷಿಸಲು ಪ್ಲ್ಯಾಸ್ಟಿಕ್ ಹೊದಿಕೆ ಬಳಸಿ.
  • ಮೇಲಾವರಣದಲ್ಲಿ ತೇವಾಂಶವನ್ನು ತಗ್ಗಿಸಲು ಹೆಚ್ಚು ಬೆಳೆದ ಎಲೆಗಳನ್ನು ಕತ್ತರಿಸಿ.
  • ಹಣ್ಣಿನ ಗೊಂಚಲು ಮೂಡಿದ ನಂತರ ಹೂವಿನ ಉಳಿಕೆಗಳನ್ನು ತೆಗೆದುಹಾಕಿ.
  • ಸಾಯುತ್ತಿರುವ ಅಥವಾ ಸತ್ತ ಎಲೆಗಳನ್ನು ನಿಯಮಿತವಾಗಿ ತೆಗೆದುಹಾಕಿ, ಮಳೆಗಾಲದಲ್ಲಿ ಇದು ಇನ್ನೂ ಮುಖ್ಯ.
  • ಸೋಂಕಿತ ಸಸ್ಯದ ಭಾಗಗಳನ್ನು ಸುಟ್ಟು ಹಾಕಿ ಅಥವಾ ಬಾಳೆ ಬೆಳೆಸದ ಕಡೆ ಅವುಗಳನ್ನು ಹೂತು ಹಾಕಿ.
  • ತಂಪಾದ (14 °C ನಲ್ಲಿ ನಿಖರ ತಣಿಕೆ) ಒಣ ಸ್ಥಳಗಳಲ್ಲಿ ಹಣ್ಣನ್ನು ಶೇಖರಿಸುವುದರಿಂದ ರೋಗದ ದಾಳಿ ಕಡಿಮೆಯಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ